ಬೆಳಗಾವಿ: ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರು ನಗರದ ಸದಾಶಿವ ನಗರ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಅವರೊಂದಿಗೆ ಪುತ್ರಿಯರಾದ ಶ್ರದ್ಧಾ ಅಂಗಡಿ ಹಾಗೂ ಡಾ.ಸ್ಫೂರ್ತಿ ಪಾಟೀಲ ಬಂದಿದ್ದರು.
ಬಳಿಕ ಮಾತನಾಡಿದ ಮಂಗಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರು ಬಂದು ನನ್ನ ಪರವಾಗಿ ಪ್ರಚಾರ ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೂಡ ಬಹಳ ಪ್ರಚಾರ ನಡೆಸಿದ್ದಾರೆ. ಹೀಗಾಗಿ ಬಿಜೆಪಿಯೇ ಗೆಲ್ಲುತ್ತದೆ ಎಂಬ ವಿಶ್ವಾಸ ಇದೆ ಎಂದರು.
ಕ್ಷೇತ್ರದಾದ್ಯಂತ ಪ್ರಚಾರ ಚೆನ್ನಾಗಿ ಆಗಿದೆ. ಮುಖಂಡರು ಹಾಗೂ ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಎಲ್ಲರೂ ಬಂದು ಮತ ಚಲಾಯಿಸಬೇಕು. ಸುರಕ್ಷತಾ ಕ್ರಮಗಳನ್ನು ಕೈಗೊಂಡು ಹಕ್ಕು ಚಲಾಯಿಸಬೇಕು. ಮತಗಟ್ಟೆಯಲ್ಲೂ ಕೋವಿಡ್ ಮಾರ್ಗಸೂಚಿ ಪಾಲಿಸಲಾಗುತ್ತಿದೆ ಎಂದರು.
ಕುಟುಂಬದವರ ಮೇಲೆ ವಿಶ್ವಾಸ ಇಟ್ಟು ಪಕ್ಷದವರು ಟಿಕೆಟ್ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಪುತ್ರಿ ಶ್ರದ್ಧಾ ಶೆಟ್ಟರ್ ಮಾತನಾಡಿ, ಮತಗಟ್ಟೆಗಳಲ್ಲೂ ಕೋವಿಡ್ ಸುರಕ್ಷತಾ ಕ್ರಮಗಳನ್ನು ವಹಿಸಲಾಗಿದೆ. ಮತದಾರರು ಬಂದು ಮತ ಚಲಾಯಿಸಬೇಕು. ಇಡೀ ಪಕ್ಷ ನಮ್ಮ ಕುಟುಂಬದ ಜೊತೆ ಇದ್ದಾರೆ. ಕಾರ್ಯಕರ್ತರೂ ಶ್ರಮಿಸಿದ್ದಾರೆ. ಹೀಗಾಗಿ ತಾಯಿ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಪ್ರತಿ ಬಾರಿಯೂ ಅಪ್ಪನೊಂದಿಗೆ ಬಂದು ಮತ ಚಲಾಯಿಸುತ್ತಿದ್ದೆವು. ಆದರೆ ಈ ಬಾರಿ ಅವರಿಲ್ಲದ ನೋವು ಕಾಡುತ್ತಿದೆ ಎಂದು ಪುತ್ರಿ ಡಾ.ಸ್ಫೂರ್ತಿ ಪಾಟೀಲ ಹೇಳಿದರು.