ಬೆಂಗಳೂರು: ‘ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಅಡಿ ಸೀಟು ದೊರೆತ್ತಿದ್ದರೂ ರಾಜಾಜಿನಗರದ ಕೆ.ಎಲ್.ಇ ಶಾಲೆ ಪ್ರವೇಶ ನೀಡದೆ ವಂಚಿಸುತ್ತಿದೆ’ ಎಂದು ಪೋಷಕ ಡಿ.ಆರ್.ನಾಗೇಂದ್ರ ದೂರಿದ್ದಾರೆ.
‘ದಾಖಲಾತಿಗಾಗಿ ಏಪ್ರಿಲ್ 26ರಂದು ಶಾಲೆಗೆ ಹೋದಾಗ, ಆಡಳಿತ ಮಂಡಳಿಯವರು ಮೊಬೈಲ್ ಸಂದೇಶ ಕಳುಹಿಸುತ್ತೇವೆ, ಆ ನಂತರ ಬನ್ನಿ ಎಂದಿದ್ದರು. ದಾಖಲಾತಿಗೆ ಕೊನೆಯ ದಿನವಾದ ಮೇ 3ರಂದು, ಪ್ರವೇಶ ನೀಡುವುದಿಲ್ಲ. ಏನು ಬೇಕಾದರೂ ಮಾಡಿ, ಯಾರಿಗಾದರೂ ದೂರು ನೀಡಿ ಎಂದರು’ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
‘ಬಿಇಒ ಹಾಗೂ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದೇವೆ. ಲಾಟರಿ ಪ್ರಕ್ರಿಯೆಯಲ್ಲಿ ಆಯ್ಕೆ ಮಾಡಿದ ನಂತರ ಮತ್ತೆ ಶಾಲೆ ಬದಲಾವಣೆ ಮಾಡುತ್ತಿರುವುದು ಸರಿಯಲ್ಲ’ ಎಂಬುದು ಪೋಷಕರ ವಾದ.
‘ಕೆ.ಎಲ್.ಇ ಶಾಲೆಯಲ್ಲಿ ಒಟ್ಟು 41 ಮಕ್ಕಳಿಗೆ ಸೀಟು ನೀಡಲಾಗಿದೆ. ಶಾಲೆಯವರು 21 ಮಕ್ಕಳಿಗೆ ಮಾತ್ರ ಪ್ರವೇಶ ನೀಡಲಾಗುವುದು ಎನ್ನುತ್ತಿದ್ದಾರೆ. ಉಳಿದ 20 ಮಕ್ಕಳಿವೆ. ಎರಡನೇ ಹಂತದ ಲಾಟರಿ ಪ್ರಕ್ರಿಯೆಯಲ್ಲಿ ಬೇರೆ ಶಾಲೆ ನೀಡುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೇಳಿದೆ. ಆದರೆ, ನಮ್ಮ ಮನೆಗೆ ಹತ್ತಿರ ಇದೆ ಎಂದೇ ಆ ಶಾಲೆ ಆಯ್ಕೆ ಮಾಡಿಕೊಂಡಿದ್ದೆವು. ಈಗ ಅದನ್ನು ಬದಲಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.
‘ಕಳೆದ ಬಾರಿಯ ದಾಖಲಾತಿ ನೋಡಿ ಬಿಇಒ ಸೀಟುಗಳ ಮಾಹಿತಿ ನೀಡಿದ್ದರು. ಆದರೆ, ಶಾಲೆಯವರು ಸೀಟುಗಳ ಸಂಖ್ಯೆ ಪುನರಾವರ್ತನೆಯಾಗಿದೆ ಎನ್ನುತ್ತಿದ್ದಾರೆ. ಆ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಶೀಘ್ರಕ್ರಮ ಕೈಗೊಳ್ಳುತ್ತೇವೆ. 21 ಮಕ್ಕಳಿಗೆ ಸದ್ಯ ಶಾಲೆಯಲ್ಲಿ ಪ್ರವೇಶ ನೀಡಲಾಗಿದೆ’ ಎಂದು ಉತ್ತರ ಜಿಲ್ಲೆಯ ಡಿಡಿಪಿಐ ಅಬ್ದುಲ್ ವಾಜಿದ್ ತಿಳಿಸಿದರು.