ಬೆಳಗಾವಿ: ‘ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಏನೇ ಇದ್ದರೂ ತ್ವರಿತವಾಗಿ ಮಾಡಬೇಕು. ಉಹಾಪೋಹಗಳಿಗೆ ತೆರೆ ಎಳೆಯಬೇಕು. ತಡವಾದರೆ ಮಾಡಲೇಬಾರದು’ ಎಂದು ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಒತ್ತಾಯಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಸಚಿವರಾದವರು ಜನಪರವಾಗಿ ಕೆಲಸ ಮಾಡಿ ತೋರಿಸಲು ಕನಿಷ್ಠ ಸಮಯವಾದರೂ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೂಡಲೆ ಕ್ರಮ ವಹಿಸಬೇಕು. ಮಾಜಿ ಸಚಿವ ಎನಿಸಿಕೊಳ್ಳಲೆಂದು ಸ್ಥಾನ ಕೊಡುವುದರಿಂದ ಪ್ರಯೋಜನ ಆಗುವುದಿಲ್ಲ’ ಎಂದು ಹೇಳಿದರು.
‘ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ; ಯಾರನ್ನೂ ಕೇಳಿಲ್ಲ. ಲಾಬಿ ಮಾಡುವುದು ನನ್ನ ಜಾಯಮಾನವಲ್ಲ’ ಎಂದು ತಿಳಿಸಿದರು.
‘ಸಚಿವ ಉಮೇಶ ಕತ್ತಿ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಸಚಿವ ಸಂಪುಟದ ಬಗ್ಗೆ ಚರ್ಚಿಸಿಲ್ಲ. ಜಿಲ್ಲೆಯಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳು, ಬಜೆಟ್ನಲ್ಲಿ ಯಾವೆಲ್ಲ ವಿಷಯಗಳಿರಬೇಕು ಎನ್ನುವ ಕುರಿತು ಚರ್ಚೆಯಾಗಿದೆ’ ಎಂದು ಪ್ರತಿಕ್ರಿಯಿಸಿದರು.