ಬೆಳಗಾವಿ: ‘ಕಾರ್ಮಿಕ ಇಲಾಖೆಯ ವತಿಯಿಂದ ಬೆಳಗಾವಿಯ ಕಟ್ಟಡ ಕಾರ್ಮಿಕರ ಹಾಗೂ ಅವರ ಅವಲಂಬಿತರ ಆರೋಗ್ಯ ತಪಾಸಣೆಗಾಗಿ ಸಂಚಾರಿ ಕ್ಲಿನಿಕ್ ಸೌಲ್ಯಭ್ಯ ಕಲ್ಪಿಸಲಾಗಿದ್ದು, ಅದನ್ನು ಬಳಸಿಕೊಳ್ಳಬೇಕು’ ಎಂದು ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಅನಿಲ ಬೆನಕೆ ತಿಳಿಸಿದರು.
ನಗರದ ರಾಣಿ ಚನ್ನಮ್ಮ ವೃತ್ತದ ಬಳಿ ಕಾರ್ಮಿಕ ಇಲಾಖೆಯ ವತಿಯಿಂದ ‘ಶ್ರಮಿಕ್ ಸಂಜೀವಿನಿ’ ಹೆಸರಿನ ಮೊಬೈಲ್ ಕ್ಲಿನಿಕ್ ವಾಹನಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಕಾರ್ಮಿಕರ ತುರ್ತು ಹಾಗೂ ಇನ್ನಿತರ ಚಿಕಿತ್ಸೆಗೆ ಈ ಸೌಲಭ್ಯ ಕಲ್ಪಿಸಲಾಗಿದೆ. ಅವರ ಕಷ್ಟದ ಸಮಯದಲ್ಲಿ ನೆರವಾಗಲಿದೆ. ವಿಶೇಷ ಯೋಜನೆ ಇದಾಗಿದ್ದು, ಎಲ್ಲ ಸ್ಥಳೀಯ ಕಾರ್ಮಿಕರ ಅವಶ್ಯಕ ಚಿಕಿತ್ಸೆಗೆ ಬಳಸಬೇಕು’ ಎಂದರು.
‘ಜನರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಮ್ಮ ಸುರಕ್ಷೆ ನಮ್ಮ ಕೈಯಲ್ಲೇ ಇದೆ. ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಲಾಕ್ಡೌನ್ಗೆ ಅವಕಾಶ ಕೊಡಬಾರದು’ ಎಂದು ಕೋರಿದರು.
ಕಾರ್ಮಿಕ ಇಲಾಖೆಯ ಆಯುಕ್ತ ವೆಂಕಟೇಶ ಶಿಂಧಿಹಟ್ಟಿ, ಕಾರ್ಮಿಕ ಇಲಾಖೆ ಅಧಿಕಾರಿ ತರನ್ನುಂ ಬೆಂಗಾಲಿ ಇದ್ದರು.