ತೆಲಸಂಗ: ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಮುಸ್ಲಿಮರು ಹಾಗೂ ಹಿಂದೂಗಳು ಸೇರಿ ಮಂಗಳವಾರ ಮೊಹರಂ ಹಬ್ಬವನ್ನು ಆಚರಿಸಿ ಭಾವೈಕ್ಯ ಮೆರೆದರು.
ಇಲ್ಲಿನ ರಾಮಾಯಣ ಮರಗಾಲು ತಂಡದ ಕಲಾವಿದರು ಮರಗಾಲು ಕಟ್ಟಿಕೊಂಡು ಕಲೆ ಪ್ರದರ್ಶಿಸಿದರು. ಅವರ ಕುಣಿತ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತು. ರಾಮ, ಸೀತೆ, ರಾವಣ, ಲಕ್ಷ್ಮಣ, ರಾಕ್ಷಸ, ಹನುಮಂತ ಮೊದಲಾದ ವೇಷ ಧರಿಸಿದ್ದು ವಿಶೇಷವಾಗಿತ್ತು. ಜನಪದ ಕಲಾ ತಂಡಗಳು ಮೆರುಗು ನೀಡಿದವು.
ಸಮೀಪದ ಕನ್ನಾಳ ಗ್ರಾಮದಲ್ಲಿ ನಾಲ್ಕು ಮುಸ್ಲಿಂ ಕುಟುಂಬಗಳು ವಾಸ ಇವೆ. ಅಲ್ಲಿ ಹಿಂದೂಗಳೇ ಸಂಭ್ರಮದಿಂದ ಹಬ್ಬ ಆಚರಿಸಿದರು. ಕಕಮರಿ, ಹಾಲಳ್ಳಿ, ಫಡತಾರವಾಡಿ, ಬನ್ನೂರದಲ್ಲೂ ಆಚರಣೆ ಕಂಡುಬಂತು.
ಬೆಳಿಗ್ಗೆ ದೇವರ ಪಂಜಾ, ಮಸೀದಿಯಿಂದ ದರ್ಗಾಕ್ಕೆ ಹೋಗಿ ಹಾಜೀಮಸ್ತಾನ್ ದೇವರ ಭೇಟಿಯಾಯಿತು. ನಂತರ ಹೊರಟ್ಟಿಗೆ ಹೋಗಿ ಅಲ್ಲಿ ಸಿಕಂದರ್ ಬಾದ್ಶಾ ದೇವರ ಭೇಟಿ ಮಾಡಿತು. ಹೆಜ್ಜೆ ಕುಣಿತ, ಕರ್ಬಲ್ ಹಾಡು ವಿಶೇಷವಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೆಳೆದವು. ಪಂಜಾವನ್ನು ಹೊಳೆಗೆ ಕಳುಹಿಸುವ ಮೂಲಕ ಹಬ್ಬಕ್ಕೆ ತರೆ ಬಿತ್ತು.