ಬೆಳಗಾವಿ: ನಗರದ ಅನಗೋಳದ ಸಂತ ಮೀರಾ ಶಾಲೆಯಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಸಂಸದೆ ಮಂಗಲಾ ಅಂಗಡಿ ಅವರು ತಮ್ಮ ಪತಿ ದಿವಂಗತ ಸುರೇಶ ಅಂಗಡಿ ಅವರ ಸ್ಮರಣಾರ್ಥ ಆಂಬುಲೆನ್ಸ್ ಅನ್ನು ಬುಧವಾರ ಕೊಡುಗೆ ನೀಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್), ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಸಹಯೋಗದಲ್ಲಿ ಕೇಂದ್ರ ನಡೆಸಲಾಗುತ್ತಿದೆ.
ಈ ವೇಳೆ ಮಾತನಾಡಿದ ಮಂಗಲಾ, ‘ಕೋವಿಡ್ ಸೋಂಕಿತರ ತುರ್ತು ಅಗತ್ಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಆಂಬುಲೆನ್ಸ್ ಸೇವೆ ನೀಡಲಾಗುವುದು. ಸುರೇಶ ಅಂಗಡಿ ಅವರು ತಮ್ಮ ಕಾರ್ಯಾವಧಿಯಲ್ಲಿ ಬೆಳಗಾವಿಯ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ತರಲು ಶ್ರಮಿಸಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಅವರ ಕನಸನ್ನು ನನಸಾಗಿಲು ಶ್ರಮಿಸುತ್ತೇನೆ’ ಎಂದು ತಿಳಿಸಿದರು.
ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಮುಖಂಡರಾದ ಪರಮೇಶ್ವರ ಹೆಗಡೆ, ಕೃಷ್ಣಾನಂದ ಕಾಮತ್, ಅಶೋಕ ಶಿಂತ್ರೆ, ಕೃಷ್ಣಭಟ್, ಲಕ್ಷ್ಮಣ ಪವಾರ ಇದ್ದರು. ಕೋವಿಡ್ ಸೋಂಕಿತರು ಆಂಬ್ಯುಲೆನ್ಸ್ ಸೇವೆಗಾಗಿ ಮೊ: 83102 25588/ 80505 03828 ಸಂಪರ್ಕಿಸಬಹುದು.