ಬೆಳಗಾವಿ: ‘ದೇಶವನ್ನು ಪ್ರಪಂಚದ ಇತರ ರಾಷ್ಟ್ರದ ದೊಡ್ಡ ವ್ಯಕ್ತಿಗಳು ನೋಡುವ ದೃಷ್ಟಿ ಬದಲಾಗಿದೆ. ಬಲಿಷ್ಠರೊಂದಿಗೆ ಪೈಪೋಟಿ ನೀಡಬಲ್ಲ ಸಶಕ್ತ ಭಾರತವನ್ನು ಪ್ರಧಾನಿ ನರೇಂದ್ರ ಮೋದಿ ನಿರ್ಮಾಣ ಮಾಡಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರ ಗ್ರಾಮೀಣ ಮತ ಕ್ಷೇತ್ರದ ಇಂಡಲಗಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘60 ವರ್ಷ ಆಳಿದ ಕಾಂಗ್ರೆಸ್ ಭಾರತವನ್ನು ಹಾಳುಗೆಡವಿತ್ತು. ಇಂದು ಪ್ರಪಂಚದ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಇಂತಹ ದೇಶ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಮೋದಿ ಅವರ ಕಾರ್ಯಕ್ಷಮತೆಯನ್ನು ವಿರೋಧಿಸುವ ಕಾಂಗ್ರೆಸ್ ಅನ್ನು ತಿರಸ್ಕರಿಸಬೇಕು’ ಎಂದು ಕರೆ ನೀಡಿದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿದರು. ಮುಖಂಡರಾದ ಶಿವಾಜಿ ಸುಂಟಕರ, ನಾಗೇಶ ಮನೋಲಕರ, ಭಾಗ್ಯಶ್ರೀ ಕೋಕಿತಕರ, ರವಿ ಪಾಟೀಲ, ರಾಮಚಂದ್ರನ ಮನೋಲಕರ, ಪೃಥ್ವಿ ಸಿಂಗ್ ಇದ್ದರು.