ಮುಂಗಾರು ಮಳೆಯ ಆಗಮನಕ್ಕೆ ತಾಲ್ಲೂಕಿನ ಕಣಕುಂಬಿ, ಚಿಗುಳೆ, ಮಾನ, ಸಡಾ, ಚಿಕಲೆ, ಅಮಟೆ, ಪಾರವಾಡ ಮತ್ತು ಸುತ್ತಲಿನ ಕಾಡಿನಲ್ಲಿ ಮಂಜು ಆವರಿಸಿ ಹೃನ್ಮನಗಳಿಗೆ ಮುದ ನೀಡುತ್ತಿದೆ. ಘಟ್ಟ ಪ್ರದೇಶದಲ್ಲಿ ತಂಪಿನ ವಾತಾವರಣ ನಿರ್ಮಾಣಗೊಂಡು ಬೇಸಿಗೆಯ ಬೇಗುದಿಯನ್ನು ಮರೆಸುತ್ತಿದೆ. ಹಚ್ಚ ಹಸಿರಿನ ವನ ಸಿರಿಯ ವೈಭವ ಮತ್ತು ಕಾನನದಲ್ಲಿ ಸುರಿಯುವ ಮಳ ಮತ್ತು ತಂಪಾದ ಚಳಿಗೆ ಮೈಯೊಡ್ಡುವುದು ನಿಸರ್ಗ ಪ್ರಿಯರ ಪಾಲಿಗೆ ಹಬ್ಬದ ವಾತಾವರಣದಂತೆ ಭಾಸವಾಗುತ್ತಿದೆ.