ಬೆಳಗಾವಿ: ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಲು ಗುರುವಾರ ಬೆಳಿಗ್ಗೆ ಬೆಂಗಳೂರಿಗೆ ಹೋಗುತ್ತಿದ್ದ ಸಾಹಿತಿ ಹಸನ್ ನಯೀಂ ಸುರಕೋಡ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿತ್ರದುರ್ಗದ ಅಪಘಾತ ನಡೆದಿದೆ.ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಲು ಬುಧವಾರ ರಾತ್ರಿ ಜಿಲ್ಲೆಯ ರಾಮದುರ್ಗದಿಂದ ಬೆಂಗಳೂರಿಗೆ ಹೋಗುತ್ತಿದ್ದರು.
ಅಪಘಾತದಲ್ಲಿ ಸುರಕೋಡ ಅವರ ತಲೆಗೆ ಸ್ವಲ್ಪ ಪೆಟ್ಟಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮುಂದೆ ಕುರಿಗಳನ್ನು ಸಾಗಿಸುತ್ತಿದ್ದ ವಾಹನಕ್ಕೆ ಇವರ ಕಾರು ಡಿಕ್ಕಿಯಾಗಿದೆ. ಆ ವಾಹನ ಪಲ್ಟಿಯಾಗಿ ಅದರಲ್ಲಿಯ ಒಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಥಳೀಯ ಪೋಲೀಸರು ಸುರಕೋಡ ಹಾಗೂ ಇತರರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮತ್ತೊಂದು ವಾಹನದಲ್ಲಿ ಬೆಂಗಳೂರಿಗೆ ಕಳಿಸಿದ್ದಾರೆ.
'ಮತ್ತೊಂದು ವಾಹನದಲ್ಲಿದ್ದ ಒಬ್ಬರು ನನ್ನೆದುರೇ ಸಾವನ್ನಪ್ಪಿದ್ದು ನನ್ನ ಮನಸ್ಸಿಗೆ ತುಂಬಾ ನೋವಾಗಿದೆ' ಎಂದು ಸುರಕೋಡರು ತಿಳಿಸಿದರು ಎಂದು ಅವರ ಸ್ನೇಹಿತ ಅಶೋಕ ಚಂದರಗಿ ಹೇಳಿದರು. ಅವರೊಂದಿಗೆ ಕುಟುಂಬದ ನಾಲ್ವರು ಸದಸ್ಯರು ಬೆಂಗಳೂರಿಗೆ ಹೋಗಿದ್ದಾರೆ.