ಮೈಸೂರು: ನಾಗರಹೊಳೆಯ ಹುಲಿ ರಕ್ಷಿತಾರಣ್ಯದ ಆನೇಚೌಕೂರು ವಲಯದಲ್ಲಿ ಮಂಗಳವಾರ ಸಿಕ್ಕಿದ ಹುಲಿಯ ಮೃತದೇಹದ ಮರಣೋತ್ತರ ಪರೀಕ್ಷೆ ಬುಧವಾರ ನಡೆಯಿತು.
ಹುಲಿಯ ವಯಸ್ಸು 12 ವರ್ಷ ದಾಟಿದೆ. ವೃದ್ಧಾಪ್ಯದಲ್ಲಿರುವುದರಿಂದ ವಯೋಸಹಜ ಬೇನೆಗಳಿಂದ ಹುಲಿ ಬಳಲುತ್ತಿತ್ತು. ಆಹಾರ ಜೀರ್ಣವಾಗಿರದೆ ಇರುವುದು ಕಂಡು ಬಂದಿದೆ. ಹುಲಿಯ ಎಲ್ಲ 18 ಉಗುರುಗಳು ಹಾಗೂ 4 ಕೋರೆಹಲ್ಲುಗಳು ಲಭಿಸಿವೆ. ಇದರಿಂದ ವಯೋಸಹಜವಾಗಿ ಹುಲಿ ಮೃತಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಎನ್ಟಿಸಿಎಫ್ ಪ್ರತಿನಿಧಿಗಳ ಸಮ್ಮುಖದಲ್ಲಿ ವೈದ್ಯ ಮುಜೀದ್ ಮರಣೋತ್ತರ ಪರೀಕ್ಷೆ ನಡೆಸಿದರು. ಈ ಹುಲಿಯ ಚಿತ್ರವು ಈ ಹಿಂದೆ ಕ್ಯಾಮೆರಾ ಟ್ರ್ಯಾಪಿಂಗ್ ವೇಳೆ ಸೆರೆಯಾಗಿತ್ತು.