ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಸಂಸತ್ ಭವನ ಕಟ್ಟಡಕ್ಕೆ ಅನುಭವ ಮಂಟಪವೆಂದು ನಾಮಕರಣ ಮಾಡಲು ಆಗ್ರಹ

Last Updated 1 ಅಕ್ಟೋಬರ್ 2021, 8:26 IST
ಅಕ್ಷರ ಗಾತ್ರ

ಬೆಳಗಾವಿ: ‘ನಗರದ ನವೀಕೃತ ರೈಲು ನಿಲ್ದಾಣಕ್ಕೆ ನಾಗನೂರು ಶಿವಬಸವ ಸ್ವಾಮೀಜಿ ಮತ್ತು ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನ ಕಟ್ಟಡಕ್ಕೆ ಅನುಭವ ಮಂಟಪ ಎಂದು ನಾಮಕರಣ ಮಾಡಬೇಕು’ ಎಂದು ವಿವಿಧ ಮಠಾಧೀಶರು ಹಾಗೂ ಹೋರಾಟಗಾರರು ಆಗ್ರಹಿಸಿದರು.

ಇಲ್ಲಿನ ಶಿವಬಸವನಗರದ ನಾಗನೂರು ರುದ್ರಾಕ್ಷಿಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಶ್ರೀಗಳು, ‘ಸಮಸ್ತ ಭಕ್ತರ ಆಶಯದ ಮೇರೆಗೆ ನಾವು ಸರ್ಕಾರದ ಎದುರು ಹಕ್ಕೊತ್ತಾಯ ಮಂಡಿಸುತ್ತಿದ್ದೇವೆ. ಇದನ್ನು ಗೌರವಿಸುವ ಮೂಲಕ, ನಾಗನೂರು ಶ್ರೀಗಳ ಆದರ್ಶವನ್ನು ಇಂದಿನ ಮತ್ತು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ರಾಜ್ಯದಿಂದ ಶಿಫಾರಸು ಮಾಡಬೇಕು’ ಎಂದು ಒತ್ತಾಯಿಸಿದರು.

ಗದಗ–ಡಂಬಳ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ‘ಕರ್ನಾಟಕದ ಗಡಿ ಭಾಗವಾದ ಬೆಳಗಾವಿಗೆ 1932ರಲ್ಲಿ ಬಂದ ಶಿವಬಸವ ಸ್ವಾಮೀಜಿ ಇಲ್ಲಿ ನೆಲೆ ನಿಂತು ಗ್ರಾಮೀಣ ಮಕ್ಕಳಿಗೆ ಅನ್ನ–ಆಶ್ರಯ ಕಲ್ಪಿಸಿದರು. ಈ ಭಾಗದಲ್ಲಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪುನರುತ್ಥಾನಕ್ಕೆ ಕಾರಣವಾದರು. ಬಡ ಮಕ್ಕಳ ಬಾಳಿಗೆ ಬೆಳಕಾದರು. ಕೆಎಲ್‌ಇ ಸಂಸ್ಥೆಯು ಶಿಕ್ಷಣ ನೀಡುತ್ತಿದ್ದರೆ ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಆಹಾರ–ವಸತಿ ಕಲ್ಪಿಸಿದವರು’ ಎಂದು ಸ್ಮರಿಸಿದರು.

ಚಿರಸ್ಥಾಯಿಯಾಗಿ ಉಳಿಯಲು: ‘ಕರ್ನಾಟಕ ಏಕೀಕರಣದೊಂದಿಗೆ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದ್ದರು. ಬೆಳಗಾವಿಯು ಕರ್ನಾಟಕದಲ್ಲಿ ಉಳಿಯುವಂತೆ ಮಾಡುವಲ್ಲಿ ಅವರ ಕೊಡುಗೆ ದೊಡ್ಡದಿದೆ. ಆಯೋಗಗಳ ಎದುರು ಪ್ರಬಲವಾಗಿ ಪ್ರತಿಪಾದಿಸಿದ್ದರು. ಜಾತಿ–ಮತ–ಪಂಥಗಳ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿ ಪ್ರಜಾಸತ್ತಾಸತ್ಮಕ ಮೌಲ್ಯಗಳನ್ನು ಎತ್ತಿ ಹಿಡಿದವರು. ಬಸವಾದಿ ಶರಣರ ಕಾಯಕ–ದಾಸೋಹ ತತ್ವಗಳ ತಳಹದಿಯಲ್ಲಿ ಪ್ರಸಾದ ನಿಲಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸತತ 7 ದಶಕಗಳವರೆಗೆ ಮುನ್ನಡೆಸಿದ ಕರ್ನಾಟಕ ಕಂಡ ಅಪ್ರತಿಮ ಕಾಯಕ ಯೋಗಿ. ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಬೇಕು’ ಎಂದು ಒತ್ತಾಯಿಸಿದರು.

‘ಸ್ವಾಮೀಜಿಯು ಜಾತ್ಯತೀತ ಹಾಗೂ ರಾಷ್ಟ್ರೀಯತೆಯ ಮನೋಭಾವ ಹೊಂದಿದ್ದರು. ಮಹಾತ್ಮ ಗಾಂಧೀಜಿ ಅವರಿಂದ ಖಾದಿ ದೀಕ್ಷೆ ಪಡೆದು ಜೀವನದುದ್ದಕ್ಕೂ ಖಾದಿ ಬಟ್ಟೆಯನ್ನೇ ಧರಿಸಿದವರು. ಎಸ್. ನಿಜಲಿಂಗಪ್ಪ, ಮೊರಾರ್ಜಿ ದೇಸಾಯಿ ಮೊದಲಾದ ಆದರ್ಶ ರಾಜಕಾರಣಿಗಳ ನಿಕಟ ಸಂಪರ್ಕದಲ್ಲಿದ್ದರು. ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಹೀಗಾಗಿ, ಆ ಮಹಾಚೇತನಕ್ಕೆ ಗೌರವ ನೀಡಬೇಕು’ ಎಂದು ಕೋರಿದರು.

ಒತ್ತಾಯಿಸಬೇಕಾಗಿದೆ: ಇಂತಹ ಕೆಲಸಗಳನ್ನು ಸರ್ಕಾರವೇ ಸ್ವಯಂಸ್ಫೂರ್ತಿಯಿಂದ ಮಾಡಬೇಕು. ಆದರೆ, ಆ ಪರಿಸ್ಥಿತಿ ಇಲ್ಲವಾದ್ದರಿಂದ ನಾವಾಗಿಯೇ ಆಗ್ರಹಿಸಬೇಕಾಗಿದೆ’ ಎಂದು ಪ್ರತಿಕ್ರಿಯಿಸಿದರು.

ನಿಡಸೋಸಿ ದುರದುಂಡೇಶ್ವರ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸೇರಿದಂತೆ ಹಲವು ಶ್ರೀಗಳು ಮತ್ತು ಹೋರಾಟಗಾರರಾದ ಅಶೋಕ ಚಂದರಗಿ ಹಾಗೂ ಸಿದಗೌಡ ಮೋದಗಿ ಇದ್ದರು.

**
ಗಡಿಯಲ್ಲಿ ಕನ್ನಡ ಉಳಿಸಲು ಶ್ರಮಿಸಿದವರು
ಶಿವಬಸವ ಸ್ವಾಮೀಜಿ ಎಲ್ಲ ಭಾಷಿಕರು ಮತ್ತು ವರ್ಗದವರನ್ನು ಒಗ್ಗೂಡಿಸಿ ಗಡಿಯಲ್ಲಿ ಕನ್ನಡ ಉಳಿಸಲು ಶ್ರಮಿಸಿದವರು. ಅವರ ಹೆಸರನ್ನು ರೈಲು ನಿಲ್ದಾಣಕ್ಕೆ ಇಟ್ಟರೆ ಎಲ್ಲರೂ ಗೌರವಿಸುತ್ತಾರೆ.
–ಗುರುಸಿದ್ಧ ಸ್ವಾಮೀಜಿ, ಕಾರಂಜಿ ಮಠ

**
ಎಲ್ಲರಿಗೂ ಪ್ರೇರಣೆಯಾಗಿದ್ದಾರೆ
ಶಿವಬಸವ ಸ್ವಾಮೀಜಿಯು ಗಡಿಯಲ್ಲಿ ಭಾರತೀಯತೆ ಮತ್ತು ಕನ್ನಡ ಪ್ರಜ್ಞೆಯ ಶಕ್ತಿಯಾಗಿದ್ದರು. ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಸರ್ಕಾರ ಮಾಡಬೇಕು.
–ಪ್ರಭು ಚನ್ನಬಸವ ಸ್ವಾಮೀಜಿ, ಮೋಟಗಿ ಮಠ, ಅಥಣಿ

**
ಕಿತ್ತೂರು ಕರ್ನಾಟಕ ಎಂದು ಮಾಡಿ
ಮುಂಬೈ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ಮರು ನಾಮಕರಣ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಮ ವಹಿಸಬೇಕು.
–ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ದುರದುಂಡೇಶ್ವರ ಮಠ, ನಿಡಸೋಸಿ

**
ನಿಯೋಗ ತೆರಳಲೂ ಸಿದ್ಧ
ಸಂಸತ್‌ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಲು ಸರ್ಕಾರದ ಮೇಲೆ ಒತ್ತಡ ತರುವಂತೆ ಸಂಸದರನ್ನು ಒತ್ತಾಯಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ನಿಯೋಗ ತೆರಳಲೂ ಸಿದ್ಧವಿದ್ದೇವೆ.
–ತೋಂಟದ ಸಿದ್ಧರಾಮ ಸ್ವಾಮೀಜಿ, ಗದಗ–ಡಂಬಳ ತೋಂಟದಾರ್ಯ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT