ಬೆಳಗಾವಿ: ಐಸಿಸ್ ಉಗ್ರಸಂಘಟನೆಯ ಸಂಪರ್ಕದಲ್ಲಿದ್ದ ಶಂಕೆಯ ಮೇಲೆ, ರಾಷ್ಟ್ರೀಯ ಭದ್ರತಾ ಪಡೆ (ಎನ್ಐಎ) ತಂಡವು ಇಬ್ಬರನ್ನು ರಾಜ್ಯದ ಗಡಿಗೆ ಹೊಂದಿಕೊಂಡ ಮಹಾರಾಷ್ಟ್ರದ ಹುಪರಿ ಎಂಬಲ್ಲಿ ಬಂಧಿಸಿದೆ.
ಈ ಬಗ್ಗೆ ನವದೆಹಲಿಯಲ್ಲಿ ಭಾನುವಾರ ಪ್ರಕಟಣೆ ನೀಡಿರುವ ಎನ್ಐಎ, ಭಯೋತ್ಪಾದಕ ಕೃತ್ಯ ಎಸಗುವ ಶಂಕೆಯ ಮೇಲೆ ದೇಶದ ಆರು ರಾಜ್ಯಗಳಲ್ಲಿ ವಿವಿಧೆಡೆ ದಾಳಿ ಮಾಡಿ ಕೆಲವರನ್ನು ಬಂಧಿಸಲಾಗಿದೆ. ಅವರಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಹುಪರಿ ಎಂಬಲ್ಲಿ ಇಬ್ಬರು ಸಿಕ್ಕಿಬಿದ್ದಿದ್ದಾರೆ ಎಂದು ತಿಳಿಸಿದೆ.
ಈ ಹುಪರಿ ಗ್ರಾಮವು ಜಿಲ್ಲೆಯ ಅಥಣಿ ತಾಲ್ಲೂಕಿನ ಕುಗನೋಳಿ ಚೆಕ್ ಪೋಸ್ಟ್ ದಾಟಿದ ತಕ್ಷಣ ಸಿಗುತ್ತದೆ.
ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನ ರೇಂದಾಳ ಗ್ರಾಮದ ಅಂಬಾಯಿ ನಗರದಲ್ಲಿ ಶಂಕಿತ ಉಗ್ರರಾದ ಇರ್ಷಾದ್ ಮತ್ತು ಅಲ್ತಾಪ್ ಸೇರಿಕೊಂಡು ಲಯ್ಬಾಕ್ ಇಮದಾದ್ ಫೌಂಡೇಷನ್ ನಡೆಸುತ್ತಿದ್ದರು. ಅವರನ್ನು ಬಂಧಿಸಿದ ವಿಷಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಯುವಕರು ಅವರ ಕಚೇರಿಯ ಮೇಲೆ ದಾಳಿ ಮಾಡಿ, ಪೀಠೋಪಕರಣ ಧ್ವಂಸ ಮಾಡಿದರು. ಈ ಇಬ್ಬರೂ ಸ್ವಂತ ಸಹೋದರರಾಗಿದ್ದಾರೆ.