ಮೈಸೂರು: ವಿಧಾನಸಭೆ ಚುನಾವಣೆ ಯಲ್ಲಿ ಗೆದ್ದವರು ಬೀಗುತ್ತಿದ್ದರೆ, ಸೋತವರು ಬೇಸರದಲ್ಲಿದ್ದಾರೆ. ಆದರೆ, ಜಿಲ್ಲೆಯ 11 ಕ್ಷೇತ್ರಗಳಲ್ಲಿ ಸುಮಾರು 16 ಸಾವಿರ ಮತದಾರರು ತಮಗೆ ಯಾವುದೇ ಅಭ್ಯರ್ಥಿಗಳು ಇಷ್ಟ ಇಲ್ಲವೆಂದು ತಿರಸ್ಕರಿಸಿದ್ದಾರೆ.
16,362 ಮತದಾರರು ವಿದ್ಯುನ್ಮಾನ ಮತಯಂತ್ರದಲ್ಲಿ ಅಳವಡಿಸಿದ್ದ ’ನೋಟಾ’ ಬಟನ್ ಒತ್ತಿ ಈ ನಿರ್ಧಾರ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿತ್ತು.
‘ನೋಟಾ’ದಿಂದ ಯಾವುದೇ ಕ್ಷೇತ್ರದ ಅಭ್ಯರ್ಥಿಯ ಸೋಲು ಗೆಲುವಿನ ಮೇಲೆ ಪರಿಣಾಮ ಉಂಟಾಗಿಲ್ಲ ವಾದರೂ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡುವ ತಮ್ಮ ಉದ್ದೇಶವನ್ನು ಮತದಾರರು ಈಡೇರಿಸಿಕೊಂಡಿದ್ದಾರೆ.
ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಬಳಿಕದ ಸ್ಥಾನ ಲಭಿಸಿರುವುದು ‘ನೋಟಾ’ಗೆ. ನಂಜನಗೂಡು ಕ್ಷೇತ್ರದಲ್ಲಿ 1,947 ಅತಿ ಹೆಚ್ಚು ‘ನೋಟಾ’ ಚಲಾವಣೆ ಆಗಿದೆ. 2017ರಲ್ಲಿ ಈ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ‘ನೋಟಾ’ಗೆ ಮೂರನೇ ಸ್ಥಾನ ಲಭಿಸಿತ್ತು.
ಕೆ.ಆರ್.ನಗರದಲ್ಲಿ ಜೆಡಿಎಸ್ನ ಸಾ.ರಾ.ಮಹೇಶ್ ಅವರು ಕಾಂಗ್ರೆಸ್ನ ಡಿ.ರವಿಶಂಕರ್ ವಿರುದ್ಧ ಕೇವಲ 1,779 ಮತಗಳಿಂದ ಗೆದ್ದಿದ್ದಾರೆ. ವಿಶೇಷವೆಂದರೆ ಈ ಕ್ಷೇತ್ರದಲ್ಲಿ 1,193 ‘ನೋಟಾ’ ಚಲಾವಣೆ ಆಗಿವೆ.
ಅತ್ಯಂತ ಕುತೂಹಲ ಮೂಡಿಸಿದ್ದ, ಸಿದ್ದರಾಮಯ್ಯ, ಜಿ.ಡಿ.ದೇವೇಗೌಡ ನಡುವೆ ಭಾರಿ ಪೈಪೋಟಿಗೆ ಕಾರಣವಾಗಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮಗೆ ಯಾರೂ ಅಗತ್ಯವಿಲ್ಲ ಎಂದು 1,549 ಮಂದಿ ನೋಟಾ ಬಟನ್ ಒತ್ತಿದ್ದಾರೆ.
ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧೆಯನ್ನು ತಡೆ ಹಿಡಿದ ಬಳಿಕ ವರುಣಾದಲ್ಲಿ ‘ನೋಟಾ’ ಅಭಿಯಾನವೇ ನಡೆದಿತ್ತು. ಈ ಕ್ಷೇತ್ರದಲ್ಲಿ 1,497 ಮಂದಿ ‘ನೋಟಾ’ ಚಲಾಯಿಸಿದ್ದಾರೆ.
ನೋಟಾ ಎಂದರೆ..?: None Of The Above ಎಂಬುದು NOTA ಪದದ ಪೂರ್ಣ ಅರ್ಥ. ಮತದಾನ ಪಟ್ಟಿಯಲ್ಲಿರುವ ಯಾರೂ ನನ್ನ ಮತಕ್ಕೆ ಅರ್ಹರಲ್ಲ ಎಂಬುದು ಇದರ ಅರ್ಥ. 2014ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ನೋಟಾ ಜಾರಿಗೊಂಡಿತು. ಈ ಬಟನ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೊನೆಯಲ್ಲಿರುತ್ತದೆ.