ಬೆಳಗಾವಿ: ‘ನಿಸ್ವಾರ್ಥ ಮನೋಭಾವದಿಂದ ಸಮಾಜ ಸೇವೆ ಮಾಡಬೇಕು’ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ಇಲ್ಲಿನ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ಭಾನುವಾರ ನಡೆದ ಜಿತೋ (ಜೈನ ಅಂತರಾಷ್ಟ್ರೀಯ ವ್ಯಾಪಾರ ಸಂಸ್ಥೆ) ಬೆಳಗಾವಿ ವಿಭಾಗದ 2021–22ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
‘ಸಮಾಜ ಸೇವೆ ಮಾಡಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಸಂಘ–ಸಂಸ್ಥೆಗಳವರು ಆ ಅವಕಾಶ ಬಳಸಿಕೊಳ್ಳಬೇಕು. ಯುವಕರಿಗೆ ಮಾರ್ಗದರ್ಶನ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ‘ಜಿತೋ ಸಂಸ್ಥೆಯು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಜನಮಾನಸದಲ್ಲಿ ಹೆಸರು ಗಳಿಸಿದೆ. ಸೇವಾ ಚಟುವಟಿಕೆಗಳು ಮುಂದುವರಿಯಲಿ’ ಎಂದು ಆಶಿಸಿದರು.
ಜಿತೋ ಅಪೆಕ್ಸ್ ನಿರ್ದೇಶಕ ಸತೀಶ ಮೆಹ್ತಾ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
2020–21ನೇ ಸಾಲಿನಲ್ಲಿ ಸಂಸ್ಥೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಕರ್ನಾಟಕ, ಕೇರಳ ಹಾಗೂ ಗೋವಾ ವಲಯದ ಕಾರ್ಯದರ್ಶಿ ವಿಕ್ರಮ ಜೈನ ಅವರಿಗೆ ‘ಜಿತೋ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉದ್ಯಮಿ ಗೋಪಾಲ ಜಿನಗೌಡ ಮತ್ತು ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರಾಜೀವ ದೊಡ್ಡಣ್ಣವರ ಅಲ್ಪಸಂಖ್ಯಾತರ ಯೋಜನೆಗಳ ಮಾಹಿತಿ ಹೊತ್ತಿಗೆ ಬಿಡುಗಡೆ ಮಾಡಿದರು.
ನೂತನ ಅಧ್ಯಕ್ಷ ಪುಷ್ಪಕ ಹನಮಣ್ಣವರ, ಪ್ರಧಾನ ಕಾರ್ಯದರ್ಶಿ ಅಮಿತ ದೋಷಿ, ಖಜಾಂಚಿ ಅಭಿಷೇಕ ಮಿರ್ಜಿ, ಉಪಾಧ್ಯಕ್ಷರಾದ ಮುಖೇಶ ಪೋರವಾಲ, ವೀರಧವಳ ಉಪಾಧ್ಯೆ, ಕಾರ್ಯದರ್ಶಿಗಳಾಗಿ ಎನ್. ಪೋರವಾಲ, ವಿಜಯಕುಮಾರ ಪಾಟೀಲ, ಜಂಟಿ ಖಜಾಂಚಿ ಆಕಾಶ ಪಾಟೀಲ ಮತ್ತು ಸದಸ್ಯರಾಗಿ ಮಹೇಂದ್ರ ಪರಮಾರ, ಮತ್ತು ನಿತಿನ ಚಿಪ್ರೆ ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಅಧ್ಯಕ್ಷ ಸುನಿಲ ಕಟಾರಿಯಾ ಸ್ವಾಗತಿಸಿದರು. ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಅಂಕಿತ ಖೋಡಾ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಕ ದಡೂತಿ, ಪ್ರಮೋದ ಪಾಟೀಲ, ಡಾ.ಗೋಮಟೇಶ ಕುಸನಾಳೆ ಅತಿಥಿಗಳನ್ನು ಪರಿಚಯಿಸಿದರು. ಬಿ.ಪೋರವಾಲ ನಿರೂಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.