ಬೆಳಗಾವಿ: ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಕುರಿತು ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ನೀಡಿರುವ ಹೇಳಿಕೆಯನ್ನು ಲಿಂಗಾಯತ ಪಂಚಮಸಾಲಿ ಸಮಾಜ, ಬಸವ ಸೇನೆ ಸೇರಿ ವಿವಿಧ ಸಂಘಟನೆಗಳ ಮುಖಂಡರು ಖಂಡಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಿಂಗಾಯತ ಪಂಚಮಸಾಲಿ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಪಾಟೀಲ, ‘ಮಾಜಿ ಶಾಸಕರು ಶಾಸಕಿ ವಿರುದ್ಧ ಅಸಹನೀಯ ಪದ ಬಳಸಿ ಅವಮಾನಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ತಕ್ಷಣ ಅವರು ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.
‘ರಾಜಕೀಯವಾಗಿ ಟೀಕೆ–ಟಿಪ್ಪಣಿಗಳನ್ನು ಮಾಡಲಿ. ಆದರೆ, ವೈಯಕ್ತಿಕ ಮಟ್ಟಕ್ಕಿಳಿದು ಟೀಕೆ ಮಾಡಿರುವುದು ಸರಿಯಲ್ಲ. ಇದು ಪುನಾವರ್ತನೆ ಆಗಬಾರದು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಬಸವ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಖಿರಾಯಿ, ‘ರಾಜಕೀಯ ದ್ವೇಷಕ್ಕಾಗಿ ಸಂಜಯ ಪಾಟೀಲ ಹೀಗೆ ವೈಯಕ್ತಿಕ ಟೀಕೆಗೆ ಇಳಿಯಬಾರದು. ಮಹಿಳೆಗೆ ಅಗೌರವ ತೋರಿದ ಸಂಜಯ ಪಾಟೀಲ ಅವರನ್ನು ಪಕ್ಷದಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.
ನಗರ ಘಟಕದ ಅಧ್ಯಕ್ಷ ರಾಜು ಮಗದುಮ್ಮ, ವಕೀಲ ಶಿವಪುತ್ರ ಫಡಗಲ್ಲ, ಮುಖಂಡರಾದ ಧರೆಪ್ಪ ಠಕ್ಕನ್ನವರ, ರಾಮನಗೌಡ ಪಾಟೀಲ ಇದ್ದರು.