ಅಥಣಿ: ‘ಹಣ, ಅಧಿಕಾರವಿದೆ ಎಂದು ಸೊಕ್ಕಿನಿಂದಿರುವುದು ಸರಿಯಲ್ಲ. ಸಿರಿ, ಸಂಪತ್ತು ಇದ್ದಾಗ ದಾನ, ಧರ್ಮ ಮಾಡಿ ಪುಣ್ಯ ಪಡೆದುಕೊಳ್ಳಬೇಕು. ದೇವರಿಗೆ ಬೇಡಿಕೊಂಡ ಹರಕೆಯನ್ನು ತಡ ಮಾಡದೇ ತೀರಿಸುವುದು ಒಳ್ಳೆಯದು. ಪರಮಾತ್ಮ ಮಾಡಿದ ಉಪಕಾರವನ್ನು ತೀರಿಸಲು ಎಂದಿಗೂ ಸಾಧ್ಯವಿಲ್ಲ’ ಎಂದು ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ದಾನೇಶ್ವರ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಕಟಗೇರಿ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬಂಡಿಗಣಿ ಮಠದಿಂದ ಹಮ್ಮಿಕೊಂಡಿದ್ದ ದೇವಿಯ ನೈವೇದ್ಯ ಹಾಗೂ ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮದದಲ್ಲಿ ಅವರು ಮಾತನಾಡಿದರು.
‘ಅಧರ್ಮದ ದಾರಿ ಬಿಟ್ಟು ಧರ್ಮದ ದಾರಿಯಲ್ಲಿ ನಡೆದರೆ ಧರ್ಮ ನಮ್ಮನ್ನು ಸದಾ ರಕ್ಷಣೆ ಮಾಡುತ್ತದೆ. ಕಾಯಕದಲ್ಲಿ ದೇವರ ನಾಮಸ್ಮರಣೆ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ದುಷ್ಟರ ಸಂಗ ಮಾಡದೇ ಸಜ್ಜನರ ಸಂಗದಲ್ಲಿ ಜೀವನ ಸಾಗಿಸಿದರೆ ಒಳ್ಳೆಯದು’ ಎಂದು ಸಲಹೆ ನೀಡಿದರು.
‘ಬಂಡಿಗಣಿ ಮಠದ ದಾಸೋಹವನ್ನು ಸರ್ವ ದೇವಾದಿಗಳ ಸಹಾಯದಿಂದ ಕೈಲಾಸದ ಬುತ್ತಿಯನ್ನು ತಂದು ನಡೆಸಲಾಗುತ್ತಿದೆ. ಮದ್ಯ ಸೇವಿಸುವುದನ್ನು, ಸುಳ್ಳು ಹೇಳುವುದನ್ನು, ಕಳವು ಮಾಡುವುದನ್ನು ಬಿಟ್ಟರೆ, ಇನ್ನೊಬ್ಬರ ಮನಸ್ಸು ನೋಯಿಸುವುದನ್ನು ಬಿಟ್ಟರೆ ಮಾತ್ರ ಮಠದ ಭಕ್ತರಾಗಲು ಸಾಧ್ಯ. ಮಹಾತ್ಮರ ದರ್ಶನದಿಂದ ಮುಕ್ತಿ ದೊರೆಯುತ್ತದೆ’ ಎಂದರು.