ಬೆಳಗಾವಿ: ಇಲ್ಲಿನ ಹರಿದಾಸ ಸೇವಾ ಸಮಿತಿಯವರು ಭಾಗ್ಯನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ಏ. 12ರಿಂದ ಮೂರು ದಿನಗಳವರೆಗೆ ಹಮ್ಮಿಕೊಂಡಿರುವ ‘ಹರಿದಾಸ ಹಬ್ಬ’ದ ಪೂರ್ವಭಾವಿಯಾಗಿ ಗುರುವಾರ ಶೋಭಾಯಾತ್ರೆ ಸಂಭ್ರಮದಿಂದ ನಡೆಯಿತು.
ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಬೆಳ್ಳಿರಥದ ಮೆರವಣಿಗೆಯಲ್ಲಿ ಕರೆತರಲಾಯಿತು. ಟಿಳಕ ವೃತ್ತದಿಂದ ಆರಂಭವಾದ ಯಾತ್ರೆ ರಾಮಲಿಂಗಖಿಂಡ್ ಗಲ್ಲಿ, ಕಿರ್ಲೋಸ್ಕರ್ ರಸ್ತೆ ಮಾರ್ಗವಾಗಿ ಮಾರುತಿಗಲ್ಲಿ ಮಾರುತಿ ದೇವಸ್ಥಾನದವರೆಗೆ ಸಾಗಿತು. ವಿವಿಧ ಭಜನಾ ಮಂಡಳಗಳ ಮಹಿಳೆಯರು ಹರಿದಾಸರ ಪದಗಳನ್ನು ಹಾಡುತ್ತಾ, ನೃತ್ಯ ಮಾಡುತ್ತಾ, ಕೋಲಾಟ ಆಡುತ್ತಾ ಸಂಭ್ರಮದಿಂದ ಪಾಲ್ಗೊಂಡಿದ್ದರು. ಶೋಭಾಯಾತ್ರೆಯ ಮೆರುಗು ಹೆಚ್ಚಿಸಿದರು.
ಬಳಿಕ ಮಾರುತಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪೇಜಾವರ ಸ್ವಾಮೀಜಿ, ‘ದಾಸರಲ್ಲಿ ಮೊದಲ ದಾಸರೆಂದರೆ ಹನುಮಂತ ದೇವರು. ಲಂಕೆಗ ಹೋದಾಗ ತಾನು ತನ್ನ ಕುರಿತು ಏನನ್ನೂ ಹೇಳಿಕೊಳ್ಳದೇ ರಾಮನ ದಾಸನೆಂದು ಪರಿಚಯ ಮಾಡಿಕೊಂಡ’ ಎಂದರು.
‘ರಾಮನವಮಿ ಸಂದರ್ಭದಲ್ಲಿ ನಡೆಯುತ್ತಿರುವ ಹರಿದಾಸ ಹಬ್ಬ ಅಪರೂಪದ ಕಾರ್ಯಕ್ರಮವಾಗಿದೆ’ ಎಂದು ಹೇಳಿದರು.