ಅಥಣಿ: ‘ತಹಶೀಲ್ದಾರ್ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಫೋನ್ ಕರೆಗಳನ್ನು ಸ್ವೀಕರಿಸುವುದಿಲ್ಲ. ಝೀರೋ ಪಾಯಿಂಟ್ ಪುನರ್ವಸತಿ ಕೇಂದ್ರದಲ್ಲಿ ಬೆಳಕಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳಿಲ್ಲ. ಇದರಿಂದ ಬಹಳ ತೊಂದರೆಯಾಗಿದೆ’ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
ಪುನರ್ವಸತಿ ಕೇಂದ್ರಕ್ಕೆ ಬಂದಿದ್ದ ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ ಎದುರು ಜನರು ತಹಶೀಲ್ದಾರ್ ನಡೆಯನ್ನು ಖಂಡಿಸಿದರು.
ಕೂಡಲೇ ತಹಶೀಲ್ದಾರ್ಗೆ ಮೊಬೈಲ್ ಫೋನ್ನಲ್ಲಿ ಕರೆ ಮಾಡಿದ ನಿರಾಣಿ, ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ‘ಜನರು ಕರೆ ಮಾಡಿದರೆ ಸ್ವೀಕರಿಸದಿರುವ ಧೋರಣೆ ಸರಿಯಲ್ಲ. ಪರಿಹಾರ ಕೇಂದ್ರಗಳಿಗೆ ಭೇಟಿ ಕೊಟ್ಟಿಲ್ಲವೇಕೆ, ಏನು ಕೆಲಸ ಮಾಡುತ್ತಿದ್ದೀರಿ? ಎಂದು ಬಿಸಿ ಮುಟ್ಟಿಸಿದರು.
‘ಸಂತ್ರಸ್ತರು ಧೈರ್ಯ ಕಳೆದುಕೊಳ್ಳಬಾರದು. ಸರ್ಕಾರ ನಿಮ್ಮ ನೆರವಿಗೆ ಬರುತ್ತದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಎಲ್ಲ ಕಡೆಯೂ ವೀಕ್ಷಿಸಿದ್ದು, ಸೂಕ್ತ ಪರಿಹಾರ ಕೊಡಿಸುತ್ತಿದ್ದಾರೆ. ನಿಮ್ಮೊಂದಿಗೆ ನಾವಿದ್ದೇವೆ. ಯಾರೂ ಆತಂಕ ಪಡಬಾರದು. ಹಲವು ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಒದಗಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಭರವಸೆ ನೀಡಿದರು.