ಬೆಳಗಾವಿ: ಇಲ್ಲಿನ ಶಿವಬಸವ ನಗರದ ಡಾ.ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಸಂಸ್ಥೆ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ 22ನೇ ಅಖಿಲ ಭಾರತ ಕವಯತ್ರಿಯರ ಸಮ್ಮೇಳನ ಸೋಮವಾರ ಸಂಪನ್ನಗೊಂಡಿತು.
ಪಂಜಾಬ್ನ ಅಮೃತಸರದಲ್ಲಿ 23ನೇ ಸಮ್ಮೇಳನ ನಡೆಸುವ ನಿರ್ಣಯ ಕೈಗೊಳ್ಳಲಾಯಿತು.
ಪದಾಧಿಕಾರಿಗಳ ಆಯ್ಕೆ: ಆಲ್ ಇಂಡಿಯಾ ಪೋಯಿಟ್ ಕಾನ್ಫರೆನ್ಸ್(ಎಐಪಿಸಿ) ರಾಷ್ಟ್ರೀಯ ಅಧ್ಯಕ್ಷೆಯಾಗಿ ಅಸ್ಸಾಂನ ಮೋನೋಮತಿ ಕುರಮಿ, ಉಪಾಧ್ಯಕ್ಷರಾಗಿ ವಿಜಯಲಕ್ಷ್ಮಿ ಕೋಸಗಿ, ಮಂಗಲಾ ಮೆಟಗುಡ್ಡ, ಜ್ಯೋತಿ ಬದಾಮಿ, ಡಾ.ಕೆ.ಪಿ.ಸುಧೀರಾ, ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಡಾ.ಸರೋಜಾ ಜಿ.ಎಸ್. ಅವರನ್ನು ಆಯ್ಕೆ ಮಾಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಎಐಪಿಸಿ ಗೌರವ ಸಂಸ್ಥಾಪಕ ಡಾ.ಲಾರಿ ಆಜಾದ್, ‘ಮುಂದಿನ 10 ವರ್ಷಗಳಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳ ಅಧ್ಯಕ್ಷರು ಮತ್ತು ಪ್ರಧಾನಿಗಳು ಮಹಿಳೆಯರೇ ಆಗಿರುತ್ತಾರೆ. ನಮ್ಮಲ್ಲಿ ಈಗ ಪಿತೃಪ್ರಧಾನ ಸಮಾಜ ಮತ್ತು ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ ಮಹಿಳಾ ಪ್ರಧಾನ ಸಮಾಜ ನಿರ್ಮಾಣವಾಗಲಿದೆ’ ಎಂದರು.
‘ಭಾಷಾ ಸೌಹಾರ್ದದ ಮೂಲಕ ಎಲ್ಲರಲ್ಲೂ ಏಕತೆಯ ಭಾವ ಮೂಡಿಸುವುದೇ ಈ ಸಮ್ಮೇಳನದ ಉದ್ದೇಶವಾಗಿದೆ. ಹಲವು ರಾಜ್ಯಗಳ ಕವಯತ್ರಿಯರು ಭಾಗವಹಿಸಿರುವುದು ಖುಷಿ ತಂದಿದೆ’ ಎಂದರು.
ಮೋನೋಮತಿ ಕುರಮಿ, ‘ತಮಗೆ ವಹಿಸಿದ ಜವಾಬ್ದಾರಿಯನ್ನು ಮಹಿಳೆಯರು ಸಮರ್ಥವಾಗಿ ನಿಭಾಯಿಸಬೇಕು. ಯುವಜನಾಂಗವನ್ನು ಸಂಘಟನೆಯತ್ತ ಕರೆತರುವ ಕೆಲಸವಾಗಬೇಕು’ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ ಅವರು ಎಐಪಿಸಿಗೆ ₹50 ಸಾವಿರ ದೇಣಿಗೆ ನೀಡಿದರು.
ಶೈಲಜಾ ಭಿಂಗೆ, ನೀಲಗಂಗಾ ಚರಂತಿಮಠ, ಪ್ರತಿಭಾ ಕಳ್ಳಿಮಠ, ನಂದಾ ಗಾರ್ಗಿ, ಸರ್ವಮಂಗಳಾ ಅರಳಿಮಟ್ಟಿ ಇದ್ದರು. ಕರ್ನಾಟಕ, ಮಹಾರಾಷ್ಟ್ರ, ಗೋವಾ, ಓರಿಸ್ಸಾ, ಉತ್ತರ ಪ್ರದೇಶ, ಪಂಜಾಬ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು–ಕಾಶ್ಮೀರ ಮತ್ತಿತರ ರಾಜ್ಯಗಳ ಕವಿಯತ್ರಿಯರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದರು.