ಬೆಳಗಾವಿ: ‘ದೇಶದಲ್ಲಿ ಭಾಷೆಗಳ ವಿಷಯದಲ್ಲಿ ಕೆಟ್ಟ ರಾಜಕಾರಣ ನಡೆಯುತ್ತಿದೆ’ ಎಂದು ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಇಲ್ಲಿನ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಶನಿವಾರ ನಡೆದ ಬಸವರಾಜ ಕಟ್ಟೀಮನಿ 100ನೇ ಜನ್ಮದಿನ, ಕಾದಂಬರಿ, ಕಥಾಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಮಗೇ ಗೊತ್ತಿಲ್ಲದೆ ನಮ್ಮ ಭಾಷೆಯ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದೇವೆಯೇ ಎನಿಸುತ್ತಿದೆ. ಈಗ, ಹಿಂದಿಯು ಪ್ರಾಬಲ್ಯದ ಭಾಷೆಯಾಗಿದೆ. ಹೀಗಾಗಿ ಅಧಿಕಾರದ ದಬ್ಬಾಳಿಕೆಯ ವಿರುದ್ಧ ಹೋರಾಟ ನಡೆಯುತ್ತಿದೆ. ಅಧಿಕಾರದ ಬಲ ಹಾಗೂ ಮನೋಭಾವದಿಂದ ಭಾಷೆಗಳನ್ನು ಕೊಲ್ಲುತ್ತಿದ್ದೇವೆ’ ಎಂದರು.
‘ಸಂಪರ್ಕ ಭಾಷೆ ಬೇಕು ಎನ್ನುವ ನುಸುಳುವಿಕೆಯಲ್ಲಿ ಕನ್ನಡವನ್ನು ಮೂಲೆಗುಂಪು ಮಾಡುವುದನ್ನು ವಿರೋಧಿಸುತ್ತಿದ್ದೇವೆಯೇ ಹೊರತು ಭಾಷೆಯನ್ನಲ್ಲ. ಈ ಭಾಷಾ ದುರಂತಕ್ಕೆ ನಾವೇ ಕಾರಣ. ಭಾಷೆ ಹೋದರೆ ಇಡೀ ಒಂದು ಸಂಸ್ಕೃತಿಯ ನೆನಪುಗಳು ಹೋಗಿಬಿಡುತ್ತವೆ’ ಎಂದು ಎಚ್ಚರಿಸಿದರು.
ಕಾದಂಬರಿಕಾರ ಡಾ.ರಹಮತ್ ತರೀಕೆರೆ, ‘ದೇಶಪ್ರೇಮ, ಆಹಾರ, ರಾಷ್ಟ್ರೀಯತೆ ಹೆಸರಿನಲ್ಲಿ ಪ್ರಭುತ್ವವು ಕತ್ತಿ ಮಸೆಯುತ್ತಿರುವ ಸಂದರ್ಭವಿದು’ ಎಂದು ವಿಶ್ಲೇಷಿಸಿದರು.