ಬೆಳಗಾವಿ: ಇಲ್ಲಿನ ಸಹ್ಯಾದ್ರಿ ನಗರದ ಮಹಾಬಲೇಶ್ವರ ಉದ್ಯಾನದ ಅಭಿವೃದ್ಧಿ ಕಾಮಗಾರಿ ವಿವರವನ್ನು ಒಳಗೊಂಡ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಫೋಟೊ ಹೊಂದಿರುವ ಫಲಕಕ್ಕೆ ಸ್ಥಳೀಯರು ತೆಂಗಿನಕಾಯಿ ಒಡೆದು ಬುಧವಾರ ಪೂಜೆ ಸಲ್ಲಿಸಿದ್ದಾರೆ.
ಗುತ್ತಿಗೆದಾರರು ಮತ್ತು ಅಧಿಕಾರಿಗಳು ಅಳವಡಿಸಿದ್ದ ಫಲಕದ ಮೇಲೆ ಮಂಗಳವಾರ ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷ ಧನಂಜಯ ಜಾಧವ ನೇತೃತ್ವದಲ್ಲಿ ಆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೇರೆಯದಾದ ದೊಡ್ಡ ಫಲಕ ಅಳವಡಿಸಿದ್ದರು. ಅದರಲ್ಲಿ ಪ್ರಧಾನಿ, ಸಂಸದರು ಮೊದಲಾದವರ ಫೋಟೊ ಜೊತೆಗೆ ಶಾಸಕರ ಫೋಟೊ ಕೂಡ ಇತ್ತು. ಇದರಿಂದ ಅಸಮಾಧಾನಗೊಡ ಸ್ಥಳೀಯ ಕೆಲವು ನಾಗರಿಕರು ಮುಚ್ಚಲಾಗಿದ್ದ ಫಲಕ ತೆಗೆದು ಲಕ್ಷ್ಮಿ ಹೆಬ್ಬಾಳಕರಫೋಟೊವುಳ್ಳ ಫಲಕಕ್ಕೆ ಪೂಜಿಸಿದ್ದಾರೆ.
‘ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ. ಅದನ್ನು ಸಹಿಸದ ಕೆಲವರು ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆ ಕೇವಲ ನಗರಕ್ಕೆ ಸೀಮಿತವಾಗುತ್ತಿತ್ತು. ಶಾಸಕರ ಪ್ರಯತ್ನದಿಂದಾಗಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿರುವ ನಮ್ಮ ಪ್ರದೇಶಗಳಿಗೂ ಅನುದಾನ ಬಂದಿದೆ. ಶಾಸಕರು ಅಧಿಕಾರಿಗಳೊಂದಿಗೆ ಜಗಳ ಮಾಡಿ ಅನುದಾನ ತಂದಿದ್ದಾರೆ. ಅದನ್ನು ಸ್ವಾಗತಿಸಬೇಕು. ವಿನಾಕಾರಣ ರಾಜಕಾರಣ ಮಾಡಬಾರದು’ ಎಂದರು.
ವನಿತಾ ಗೊಂಧಳಿ, ಪ್ರವೀಣ ಗೊಂಧಳಿ, ದೀಪಕ್ ಬುರುಡ, ದತ್ತು ಗೋಂಧಳಿ, ಭೀಮಪ್ಪ ಮೆಳವಂಕಿ, ಇಮ್ತಿಯಾಜ್ ಬಾಂಗಿ ಇದ್ದರು.