ಅಥಣಿ: ತಾಲ್ಲೂಕಿನ ಗುಂಡೇವಾಡಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಭಾನುವಾರ ‘ರಾಷ್ಟ್ರೀಯ ಪೋಷಣ್ ಅಭಿಯಾನ’ ಕಾರ್ಯಕ್ರಮ ನಡೆಯಿತು. ಸಚಿವೆ ಶಶಿಕಲಾ ಜೊಲ್ಲೆ 15 ಗರ್ಭಿಣಿಯರಿಗೆ ಉಡಿ ತುಂಬಿದರು.
ಬಳಿಕ ಮಾತನಾಡಿದ ಅವರು, ‘ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಬೇಕು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪೋಷಣ್ ಅಭಿಯಾನದಲ್ಲಿ ₹ 6ಸಾವಿರವನ್ನು ಪೌಷ್ಟಿಕ ಆಹಾರ ಖರೀದಿಸಲೆಂದು ನೀಡಲಾಗುವುದು. ಇದನ್ನು ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ಶ್ರೇಯಸ್ ಪಾಟೀಲ ಎಂಬ ಬಾಲಕನ ಹುಟ್ಟುಹಬ್ಬ ಆಚರಿಸಲಾಯಿತು.
ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ತಾಲ್ಲೂಕು ಪಂಚಾಯ್ತಿ ಇಒ ರವಿ ಬಂಗಾರೆಪ್ಪ, ಅಥಣಿ ಸಿಡಿಪಿಒ ಉದಯ ಪಾಟೀಲ, ಯೋಜನಾ ಉಪನಿರ್ದೇಶಕ ಬಸವರಾಜ ವರವಟ್ಟಿ, ಗುಂಡೇವಾಡಿ ವಿಭಾಗದ ಅಂಗನವಾಡಿ ಮೇಲ್ವಿಚಾರಕಿ ಮಹಾದೇವಿ ಸೂರ್ಯವಂಶಿ, ಜ್ಯೋತಿ ಚವಾಣ, ರಜನಿ ಹಿರೇಮಠ ಇದ್ದರು.