ಅಥಣಿ: ‘ಅಪೌಷ್ಟಿಕತೆ ನಿವಾರಣೆಗಾಗಿ ಪೋಷಣ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ದೊರೆಯುವ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದುಅಂಗನವಾಡಿ ಮೇಲ್ವಿಚಾರಕಿ ನಾಗವೇಣಿ ಮಾಳಿ ಹೇಳಿದರು.
ತಾಲ್ಲೂಕಿನ ಕೋಹಳ್ಳಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಬುಧವಾರ ನಡೆದ ‘ರಾಷ್ಟ್ರೀಯ ಪೋಷಣ ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗರ್ಭಿಣಿಯರು 9 ತಿಂಗಳವರೆಗೆ ಕಟ್ಟುನಿಟ್ಟಾಗಿ ಶುದ್ಧ ಹಾಗೂ ಪೌಷ್ಟಿಕ ಆಹಾರ ಸೇವಿಸಬೇಕು. ಕೇಂದ್ರ ಸರ್ಕಾರದಿಂದ ₹ 6ಸಾವಿರ ದೊರೆಯಲಿದ್ದು, ಅದನ್ನು ಪಡೆದುಕೊಳ್ಳಬೇಕು’ ಎಂದರು.
ಕಿರಿಯ ಆರೋಗ್ಯ ಸಹಾಯಕಿ ಎಫ್.ಎಸ್. ಕೋಲಕಾರ ಮಾತನಾಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸೋನವ್ವ ಉಮರಾಣಿ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯರಾದ ತುಕಾರಾಮ ದೇವಖಾತೆ, ಹಣಮಂತ ಕನ್ನಾಳ, ಮಹಾದೇವ ಬಿರಾದಾರ, ಹಣಮಂತ ವಳಸಂಗ, ಗುರಲಿಂಗ ಝರೆ ಇದ್ದರು.