ಬೆಳಗಾವಿ: ‘ನಗರದಲ್ಲಿ ನೀರು ಸರಬರಾಜು ಹೊಣೆಯನ್ನು ಖಾಸಗಿ ಕಂಪನಿಗೆ ಹಸ್ತಾಂತರಿಸಿದ ನಂತರ ನಮಗೆ 15 ದಿನಗಳಿಂದ ವೇತನ ಬಂದಿಲ್ಲ. ಇದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿದೆ’ ಎಂದು ನೀರು ಪೂರೈಕೆ ನೌಕರರು ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
‘ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ವ್ಯಾಪ್ತಿಯಲ್ಲಿ ಕೆಲಸ ಮಾಡುವಾಗ ವೇತನ ಸಕಾಲಕ್ಕೆ ಬರುತ್ತಿತ್ತು. ಈಗ ತೊಂದರೆಯಾಗಿದೆ. ಕಂಪನಿಯಿಂದ ನೇಮಕ ಮಾಡಿಕೊಂಡವರಿಗೆ ಸರಿಯಾಗಿ ವೇತನ ಕೊಡಲಾಗುತ್ತಿದೆ. ಆದರೆ, ನಮ್ಮನ್ನು ಕಡೆಗಣಿಸಲಾಗುತ್ತಿದೆ’ ಎಂದು ದೂರಿದರು.
‘ವೇತನ ಕೇಳಿದರೆ, ಆ ಕಂಪನಿಯವರು ಹಾರಿಕೆ ಉತ್ತರ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ನಮ್ಮ ಕೆಲಸ ಕಾಯಂಗೊಳಿಸಬೇಕು. ಸೇವಾ ಭದ್ರತೆ ಒದಗಿಸಬೇಕು. ಹಿಂದಿನಂತೆಯೇ ಸಕಾಲಕ್ಕೆ ವೇತನ ದೊರೆಯುವಂತಾಗಬೇಕು. ಇಲ್ಲವಾದಲ್ಲಿ ನಮ್ಮನ್ನು ನಗರಪಾಲಿಕೆ ಅಥವಾ ಜಲಮಂಡಳಿ ಸಿಬ್ಬಂದಿ ಎಂದೇ ಪರಿಗಣಿಸಿ ತಿಂಗಳ 5ನೇ ತಾರೀಖಿನೊಳಗೆ ವೇತನ ನೀಡಬೇಕು’ ಎಂದು ಒತ್ತಾಯಿಸಿದರು.
‘ವೇತನ ಸಿಗುವವರೆಗೂ ನೀರು ಪೂರೈಕೆ ಕೆಲಸದಿಂದ ದೂರ ಉಳಿಯಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ನೌಕರರ ಆರೋಪದ ಬಗ್ಗೆ ಪ್ರತಿಕ್ರಿಯೆಗೆ ಕಂಪನಿಯ ಪ್ರತಿನಿಧಿಗಳು ಲಭ್ಯವಾಗಲಿಲ್ಲ.