ಬೆಳಗಾವಿ: ‘ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿರುವವರ ಅಂಗಡಿಗಳ ಪರವಾನಗಿ ರದ್ದುಗೊಳಿಸಬೇಕು. ಹೊಸದಾಗಿ ಅನುಮತಿ ಕೊಡಬಾರದು’ ಎಂದು ಆಗ್ರಹಿಸಿ ಹಡಪದ ಅಪ್ಪಣ್ಣ ಸೇವಾ ಸಮಾಜ ಜಿಲ್ಲಾ ಘಟಕದ ನೇತೃತ್ವದಲ್ಲಿ ಸಮಾಜದವರು ಶನಿವಾರ ಪ್ರತಿಭಟನೆ ನಡೆಸಿದರು.
ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಅವರು, ‘ಉತ್ತರಪ್ರದೇಶ, ಬಿಹಾರದ ಬಂಡವಾಳ ಶಾಹಿಗಳು ಇಲ್ಲಿಗೆ ಬಂದು ಅಂಗಡಿಗಳನ್ನು ಆರಂಭಿಸುತ್ತಿದ್ದಾರೆ. ಆ ರಾಜ್ಯದವರನ್ನೇ ಕೆಲಸಕ್ಕೆ ನಿಯೋಜಿಸಿದ್ದಾರೆ. ಇದರಿಂದ ಸ್ಥಳೀಯ ಕ್ಷೌರಿಕರಿಗೆ ತೊಂದರೆಯಾಗುತ್ತಿದೆ. ಈ ವೃತ್ತಿ ಮೂಲಕವೇ ಜೀವನ ಕಟ್ಟಿಕೊಂಡ ಹಡಪದ ಸಮಾಜದ ಮೇಲೆ ಪೆಟ್ಟು ಬೀಳುತ್ತಿದೆ. ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಧಾರವಾಡ ಯುವ ಘಟಕದ ಅಧ್ಯಕ್ಷ ಈರಣ್ಣ ಚಿಕ್ಕಬೆಳ್ಳಿಕಟ್ಟಿ ಮಾತನಾಡಿದರು. ಸಮಾಜದ ಎಚ್.ಡಿ ವೈದ್ಯ, ಬಸವರಾಜ ಹಡಪದ, ಮಹಾಂತೇಶ ಹಂಪಣ್ಣವರ, ಸುರೇಶ ಸಡೆಕರ, ಆನಂದ ಕುರ್ಲಿ ಭಾಗವಹಿಸಿದ್ದರು.