ಬೆಳಗಾವಿ: ‘ಪರಿಷ್ಕೃತ ಪಠ್ಯಕ್ರಮದಲ್ಲಿ ನಾಡಿನ ಮಹನೀಯರಿಗೆ ಅಪಮಾನ ಎಸಗಲಾಗಿದೆ’ ಎಂದು ಆಪಾದಿಸಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟಿಸಿದರು.
‘ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಪರಿಷ್ಕೃತ ಪಠ್ಯದಲ್ಲಿ ಬಸವೇಶ್ವರ, ಸಂಗೊಳ್ಳಿ ರಾಯಣ್ಣ, ಕುವೆಂಪು ಮತ್ತಿತರ ಮಹನೀಯರಿಗೆ ಅಪಮಾನ ಮಾಡಲಾಗಿದೆ. ಮಕ್ಕಳಲ್ಲಿ ಬಾಲ್ಯದಿಂದಲೇ ಜಾತಿ ವಿಷಬೀಜ ಬಿತ್ತಲಾಗುತ್ತಿದೆ. ಪಠ್ಯವನ್ನು ಕೈಬಿಟ್ಟು, ಹಿಂದಿನ ಪಠ್ಯಕ್ರಮವನ್ನೇ ಮುಂದುವರಿಸಬೇಕು’ ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಚಕ್ರತೀರ್ಥ ಪ್ರತಿಕೃತಿಗೆ ಸೀರೆ ಉಡಿಸಿ, ದಹಿಸಲು ಮುಂದಾದರು. ಅದನ್ನು ತಡೆಯಲು ಮುಂದಾದ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತಳ್ಳಾಟ ನಡೆಯಿತು. ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ವಾಜೀದ್ ಹಿರೇಕೋಡಿ, ಗೌಸ್ ಸನದಿ, ಯುಸೂಫ್ ಶೀಗಿಹಳ್ಳಿ, ರೇಷ್ಮಾ ಕಿತ್ತೂರು, ಮಲ್ಲಿಕಾ ವಾಂಗಿ, ಕಸ್ತೂರಿ ಭಾವಿ ಇತರರಿದ್ದರು.