ಬೆಳಗಾವಿ: ಗುತ್ತಿಗೆ ಆಧಾರದ ನೇಮಕಾತಿ ರದ್ದು ಮಾಡಿ ಎಲ್ಲ ನೌಕರರನ್ನೂ ಕಾಯಂ ನೌಕರರಲ್ಲಿ ವಿಲೀನಗೊಳಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳದ ಜಿಲ್ಲಾ ಘಟಕದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಸಮಾವೇಶಗೊಂಡ ಹೋರಾಟಗಾರರು, ಮುಖ್ಯಮಂತ್ರಿಗೆ ಬರೆದ ತಮ್ಮ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದರು.
ದಿನಗೂಲಿ ನೌಕರರು ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಸರ್ಕಾರಿ ನೌಕರರಷ್ಟೇ ಕೆಲಸ ಮಾಡಿದರೂ ಅವರಿಗೆ ಸಂಬಳ ಸಿಗುತ್ತಿಲ್ಲ. ಕಾರಣ, ಎಲ್ಲ ಸೌಕರ್ಯಗಳನ್ನು ನೀಡಬೇಕು. ಹೊಸ ನೇಮಕಾತಿಗಳನ್ನು ಗುತ್ತಿಗೆ ಅಥವಾ ಹೊರಗುತ್ತಿಗೆ ಎಂದು ಪರಿಗಣಿಸದೇ, ನೇರವಾಗಿ ಆಯಾ ಇಲಾಖೆಗಳಿಂದಲೇ ನೇಮಕಾತಿ ಮಾಡಿಕೊಳ್ಳಬೇಕು ಎಂದೂ ಆಗ್ರಹಿಸಿದರು.
2013ರಿಂದಲೇ ಅನ್ವಯ ಆಗುವಂತೆ ಶೇ 100ರಷ್ಟು ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ನೀಡಬೇಕು. ದಿನಗೂಲಿಯಿಂದ ಕಾಯಂ ಆಗಿ ನಿವೃತ್ತಿ ಹೊಂದಿದ ನೌಕರರಿಗೆ ಪಿಂಚಣಿಯಲ್ಲಿ ಆಗುತ್ತಿರುವ ಅನ್ಯಾಯ ತಪ್ಪಿಸಬೇಕು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ‘ಬೆಂಗಳೂರು ಚಲೊ’ ಹೋರಾಟ ಮಾಡಬೇಕಾಗುತ್ತದೆ ಎಂದು ಮುಖಂಡರು ಎಚ್ಚರಿಸಿದರು.
ಎಲ್.ಎಲ್. ಸುಗ್ಗಾವಿ, ಕೊಳದೂರು, ಐ.ಎಲ್.ಸನದಿ, ರಾಜೇಂದ್ರ ಕಲ್ಲೂರ, ರವಿ ಭಜಂತ್ರಿ, ಪ್ರಶಾಂತ ಮುದ್ದಿ, ಸುಮಿತ್ರಾ ಶೆಟಕೆ, ರತ್ನಾ ತುಪ್ಪದ ನೇತೃತ್ವ ವಹಿಸಿದ್ದರು.
*
ಪ್ರತಿಭಟನೆ
ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಮುಗಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಸೋದೆ ತೋಟದಲ್ಲಿರುವ ಪರಿಶಿಷ್ಟರ ಕಾಲೊನಿಗೆ ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ, ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಮುಂದೆ ದರಣಿ ನಡೆಸಿದರು.
ಅಸೋದೆ ತೋಟದಲ್ಲಿರುವ ಪರಿಶಿಷ್ಟ ಕುಟುಂಬಗಳು ಸಂಚರಿಸಲು ದಾರಿ ಇಲ್ಲ. ಈ ಕುರಿತು ಪಿಡಿಒ ಅವರಿಗೆ ಸಾಕಷ್ಟು ಮನವಿ ಮಾಡಿದ್ದೇವೆ. ಆದರೂ ಕ್ರಮ ವಹಿಸಿಲ್ಲ. ಈ ಕೂಡಲೇ ರಸ್ತೆ ನಿರ್ಮಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದೂ ಕಿಡಿ ಕಾರಿದರು.
ಅಸೋದೆ ತೋಟದಲ್ಲಿ 30 ಪರಿಶಿಷ್ಟ ಕುಟುಂಬಗಳಿವೆ. 30 ಮಕ್ಕಳು ಮುಗಳಿ ಗ್ರಾಮಕ್ಕೆ ಶಾಲೆಗೆ ಹೋಗುತ್ತಾರೆ. ಎರಡೂ ಗ್ರಾಮಗಳ ಮಧ್ಯದಲ್ಲಿ ಹಳ್ಳ ಹರಿಯುತ್ತಿದೆ. ಮಳೆಗಾಲ ಬಂದಿದ್ದರಿಂದ ಹಳ್ಳಗಳು ತುಂಬಿ ಹತಿಯುತ್ತಿದ್ದು, ಮಕ್ಕಳು ಶಾಲೆಗೆ ಹಳ್ಳದಾಟಿ ಹೋಗಲಗುವುದಿಲ್ಲ. ಮಳೆಗಾಲ ಮುಗಿಯುವವರೆಗೂ ಈ ಸಮಸ್ಯೆ ಇದ್ದೇ ಇರುತ್ತದೆ. 30 ವರ್ಷಗಳಿಂದ ಈ ರೀತಿಯ ಸಮಸ್ಯೆಗಳನ್ನು ಗ್ರಾಮಸ್ಥರು ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಗರ್ಭಿಣಿಯರು, ಬಾಣಂತಿಯರು ಆಸ್ಪತ್ರೆಗೆ ಹೋಗಬೇಕಾದರೆ ಈ ಹಳ್ಳ ದಾಟಬೇಕು. ಯಾರಿಗಾದರೂ ತುರ್ತು ಚಿಕಿತ್ಸೆ ಅಗತ್ಯವಿದ್ದರೆ ಪರದಾಡುವಂತಾಗಿದೆ. ಆದ್ದರಿಂದ ಅಧಿಕಾರಿಗಳು ಈ ಸಂಕಷ್ಟ ಬಗೆಹರಿಸಬೇಕು ಎಂದೂ ಆಗ್ರಹಿಸಿರು.
ಮನವಿ ಪಡೆದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಎಚ್.ವಿ. ದರ್ಶನ್, ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.
ಸಮಿತಿ ರಾಜ್ಯ ಸಂಚಾಲಕ ಪರಶುರಾಮ ನೀಲನಾಯಕ, ಜಿಲ್ಲಾ ಘಟಕದ ಸಂಚಾಲಕ ಡಾ.ಕಲ್ಲಪ್ಪ ರಾಮಚನ್ನವರ, ಸಂಘಟನಾ ಸಂಚಾಲಕ ರವಿ ಬಸ್ತವಾಡಕರ, ಖಜಾಂಚಿ ಸಿದ್ರಾಯಿ ಮೇತ್ರಿ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.