ಬೆಳಗಾವಿ: ‘ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಪ್ರಶ್ನೆಪತ್ರಿಕೆಗಳು ನ್ಯೂನತೆರಹಿತವಾಗಿರಬೇಕು’ ಎಂದು ಪ್ರಭಾರ ಡಿಡಿಪಿಯು ಬಿ.ವೈ. ಹನ್ನೂರ ಹೇಳಿದರು.
ಸಾರ್ವಜನಿಕರ ಶಿಕ್ಷಣ ಇಲಾಖೆ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಹಾಗೂ ಜೆಜಿಐ ಸಂಸ್ಥೆಯ ಜೈನ ಪಿಯು ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಪ್ರಸಕ್ತ ಶೈಕ್ಷಣಿಕ ಸಾಲಿನ ಪಿಯುಸಿ ಪ್ರಥಮ ಮತ್ತು ದ್ವಿತೀಯ ವರ್ಷದ ಅರ್ಧವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧತೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವಾಗ ಬಹಳ ಎಚ್ಚರ ವಹಿಸಬೇಕು. ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಗಮನದಲ್ಲಿಟ್ಟುಕೊಳ್ಳಬೇಕು. ತಪ್ಪುಗಳು ಇಲ್ಲದಂತೆ ನೋಡಿಕೊಳ್ಳಬೇಕು’ ಎಂದರು.
ಮುಖ್ಯಅತಿಥಿಯಾಗಿದ್ದ ಜೈನ ಸಮೂಹ ಸಂಸ್ಥೆ ನಿರ್ದೇಶಕಿ ಶ್ರದ್ಧಾ ಖಟವಟೆ, ‘ಗುಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡತ್ತಾ ಬಂದಿರುವ ಜೆಜಿಐ ಸಂಸ್ಥೆ, ಸಾಮಾಜಿಕ ಹಿತಾಸಕ್ತಿ ಕಾಪಾಡುವುದಕ್ಕೂ ಮುತುವರ್ಜಿ ವಹಿಸುತ್ತಿದೆ’ ಎಂದು ತಿಳಿಸಿದರು.
ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಸ್.ಜಿ. ಖೋದನ್ನವರ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಕೆ.ಪಿ. ಶಿವರಾಯಿ ಸ್ವಾಗತಿಸಿದರು. ನಿರ್ದೇಶಕರಾದ ಎಸ್.ಬಿ. ಶಿರಶ್ಯಾಡ ಹಾಗೂ ಜೈನ ಕಾಲೇಜಿನ ಪ್ರಾಚಾರ್ಯರಾದ ರೋಹಿಣಿ ಕೆ.ಬಿ. ಇದ್ದರು.
ಸ್ಮೃತಿ ಹಾಗೂ ಶ್ರದ್ಧಾ ಪ್ರಾರ್ಥನಾ ಗೀತೆ ಹಾಡಿದರು. ಕೆ.ಎನ್. ದೊಡ್ಡಮನಿ ನಿರೂಪಿಸಿದರು. ಜ್ಯೋತಿ ಸಿ.ಎಸ್. ವಂದಿಸಿದರು.