ಹುಕ್ಕೇರಿ: ‘10 ವರ್ಷಗಳ ಹಿಂದೆಯೇ ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರ ಎಂದು ಘೋಷಿಸಲಾಗಿದೆ. ಆದರೆ ಪಕ್ಕದ ಅಫ್ಗಾನಿಸ್ತಾನ್ ಮತ್ತು ಪಾಕಿಸ್ತಾನದಲ್ಲಿ ಪೋಲಿಯೊ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಇಲ್ಲಿನ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲಾಗುತ್ತಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಹೇಳಿದರು.
ಭಾನುವಾರ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪೋಲಿಯೊ ಲಸಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ದಸ್ತಗೀರ್ ಬಸ್ಸಾಪುರಿ, ಹುಕ್ಕೇರಿ ಪುರಸಭೆ ಅದ್ಯಕ್ಷ ಅಣ್ಣಾಗೌಡ ಪಾಟೀಲ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಅನಸೂಯಾ ಪಾಟೀಲ, ಚಿಕ್ಕ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿದರು.
ತಾಲ್ಲೂಕಿನಲ್ಲಿ 202 ಬೂತ್ ರಚಿಸಿದ್ದು, 824 ಲಸಿಕೆದಾರರನ್ನು ನಿಯೋಜಿಸಲಾಗಿದೆ. 3,062 ಮಕ್ಕಳಿಗೆ ಲಸಿಕೆ ನೀಡಲು ಗುರಿ ಹಾಕಲಾಗಿದೆ. ಬೇರೆ ರಾಜ್ಯ ಮತ್ತು ಪ್ರದೇಶಗಳಿಂದ ವಲಸೆ ಬಂದ ಕೂಲಿ ಕಾರ್ಮಿಕರ ಮಕ್ಕಳಿಗೂ ಸಹ ಲಸಿಕೆ ನೀಡಲಾಗುವುದು. ಹುಕ್ಕೇರಿ, ಸಂಕೇಶ್ವರ, ಯಮಕನಮರಡಿ ಬಸ್ ನಿಲ್ದಾಣಗಳಲ್ಲಿ ವಿಶೇಷ ಬೂತ್ ನಿರ್ಮಿಸಲಾಗಿದೆ.
ತಹಶೀಲ್ದಾರ್ ಅಶೋಕ ಗುರಾಣಿ, ಪಲ್ಸ್ ಪೋಲಿಯೊ ತಾಲ್ಲೂಕು ನೋಡಲ್ ಅಧಿಕಾರಿ ಡಾ.ಶಿವಲೀಲಾ ಶಿರೋಳ, ಡಾ. ಮಹಾಂತೇಶ ನರಸನ್ನವರ, ಡಾ. ಆರ್.ಎ.ಮಕಾನದಾರ್, ಡಾ.ದೀಪಕ್ ಅಂಬಲಿ, ಸಿಡಿಪಿಒ ಮಂಜುನಾಥ ಪರಸನ್ನವರ, ಉದಯ ಬೆಟಗೇರಿ, ಶ್ರೀದೇವಿ ಶಿರೆಪ್ಪನವರ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.