ಹಂದಿಗುಂದ (ಬೆಳಗಾವಿ ಜಿಲ್ಲೆ): ಈ ಭಾಗದ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ ಎನ್ಡಬ್ಲ್ಯುಕೆಆರ್ಟಿಸಿಯಿಂದ ಶುಕ್ರವಾರ ಬಸ್ ವ್ಯವಸ್ಥೆ ಮಾಡಲಾಯಿತು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಸೈಕಲ್, ದ್ವಿಚಕ್ರವಾಹನಗಳು ಮೊದಲಾದವುಗಳನ್ನು ಅವಲಂಬಿಸಿದ್ದುದು ಮತ್ತು ನಡೆದುಕೊಂಡು ಹೋಗುತ್ತಿದ್ದ ಬಗ್ಗೆ ಮತ್ತು ಬಸ್ಗಳಿಲ್ಲದೆ ಪರದಾಡುತ್ತಿದ್ದ ಕುರಿತು ‘ಪ್ರಜಾವಾಣಿ’ಯಲ್ಲಿ ಗುರುವಾರ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಸಾರಿಗೆ ಅಧಿಕಾರಿಗಳು ಬಸ್ ಕಾರ್ಯಾಚರಣೆ ನಡೆಸಿದರು.
ನಿಗಮದ ರಾಯಬಾಗ ಡಿಪೊ ವ್ಯವಸ್ಥಾಪಕ ಶಶಿಕಾಂತರಾವ ಹಂಚನಾಳಕಾರ ಹಾಗೂ ಬಿಇಒ ಪ್ರಭಾವತಿ ಪಾಟೀಲ ಅವರ ಪ್ರಯತ್ನದಿಂದ ಹಂದಿಗುಂದ, ಸುಲ್ತಾನಪೂರ, ಕಪ್ಪಲಗುದ್ದಿ, ಪಾಲಬಾವಿ ಗ್ರಾಮಗಳ ಹಾಗೂ ಮುಗಳಖೋಡ ಪಟ್ಟಣದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಯಿತು.
ಶುಕ್ರವಾರ ಬೆಳಿಗ್ಗೆ 8.30ಕ್ಕೆ ಹಂದಿಗುಂದ ಗ್ರಾಮಕ್ಕೆ ಬಂದ ಬಸ್ನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪಾಲಬಾವಿ ಹಾಗೂ ಮುಗಳಖೋಡ ಪರೀಕ್ಷಾ ಕೇಂದ್ರಗಳಿಗೆ ತೆರಳಿದರು. ಸೋಮವಾರವೂ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಶಿಕಾಂತರಾವ ಳಿಸಿದರು.
ನಿರ್ವಾಹಕ ವೈ.ಎಸ್. ಜವನಾರ, ಚಾಲಕ ಎಸ್.ಬಿ. ಮುಚ್ಚಂಡಿ, ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅಂದಾನಿ, ಸ್ಕೌಟ್ಸ್ ಆಂಡ್ ಗೈಡ್ಸ್ ಶಿಕ್ಷಕ ಎಂ.ಜಿ. ಮಾಲಗಾರ ಇದ್ದರು.