ಬೆಳಗಾವಿ: ಇಲ್ಲಿನ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಆರ್ಎಲ್ಎಸ್) ಕಾಲೇಜಿನ ಬಿ.ಎಸ್ಸಿ. ಅಂತಿಮ ವರ್ಷದ ವಿದ್ಯಾರ್ಥಿ, ಎನ್ಸಿಸಿ ವಾಯುದಳದ ಕೆಡೆಟ್ ವಿವೇಕ ದಿಮನ ಈಚೆಗೆ ಕಜಕಿಸ್ಥಾನದಲ್ಲಿ ನಡೆದ ಅಂತರರಾಷ್ಟ್ರೀಯ ಯುವ ವಿನಿಮಯ ಕಾರ್ಯಕ್ರಮದ ಶಿಬಿರದಲ್ಲಿ ಭಾಗವಹಿಸಿದ್ದರು.
‘ರಾಷ್ಟ್ರೀಯ ಜಾಗೃತಿ ಮೂಡಿಸುವುದು, ಭಾರತೀಯ ಕಲೆ ಮತ್ತು ಸಂಸ್ಕೃತಿ ಪ್ರದರ್ಶಿಸುವುದು ಹಾಗೂ ವಿವಿಧ ರಾಷ್ಟ್ರಗಳ ಕಲೆ, ಸಂಸ್ಕೃತಿ ತಿಳಿಸುವ’ ಧ್ಯೇಯೋದ್ದೇಶದೊಂದಿಗೆ ನಡೆದ ಈ ಶಿಬಿರಕ್ಕೆ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ಮತ್ತು ನಿರ್ದೇಶನಾಲಯದ ಕಠಿಣ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಕೆಡೆಟ್ಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.
ಅಖಿಲ ಭಾರತ 17 ಎನ್ಸಿಸಿ ನಿರ್ದೇಶನಾಲಯದ ಒಟ್ಟು 2,070 ಕೆಡೆಟ್ಗಳು ಗಣರಾಜೋತ್ಸವದಲ್ಲಿ ಭಾಗವಹಿಸಿದ್ದರು. ಅವರಲ್ಲಿ 105 ಮಂದಿ ಮಾತ್ರ ಅಂತರರಾಷ್ಟ್ರೀಯ ಯುವ ವಿನಿಮಯ ಕಾರ್ಯಕ್ರಮ ಶಿಬಿರಕ್ಕೆ ಆಯ್ಕೆಯಾಗಿದ್ದರು. ಕರ್ನಾಟಕ ಮತ್ತು ಗೋವಾ ಎನ್ಸಿಸಿ ನಿರ್ದೇಶನಾಲಯದಿಂದ ಸ್ಪರ್ಧಿಸಿದ್ದ 10 ಕೆಡೆಟ್ಗಳಲ್ಲಿ ವಿವೇಕ ಒಬ್ಬರು.
ಅವರನ್ನು ಕೆಎಲ್ಇ ಸಂಸ್ಥೆ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರು, ಸದಸ್ಯರು, ಪದವಿ ಕಾಲೇಜಿನ ಪ್ರಾಚಾರ್ಯ ಡಾ.ವಿ.ಡಿ. ಯಳಮಲಿ, ಪಿಯು ಕಾಲೇಜು ಪ್ರಾಚಾರ್ಯ ಪ್ರೊ.ಎಸ್.ಜಿ. ನಂಜಪ್ಪನವರ, ಎನ್ಸಿಸಿ ಅಧಿಕಾರಿ ಪ್ರೊ.ವಿ.ಸಿ. ಕಾಮಗೋಳ ಅಭಿನಂದಿಸದ್ದಾರೆ.