ಬೆಳಿಗ್ಗೆಯಿಂದ ಆಗಾಗ ಸಾಧಾರಣ ಮಳೆಯಾಯಿತು. ಆದರೆ ಸಂಜೆ 4.30ರ ನಂತರ ಜೋರಾಗಿ ಸುರಿಯಿತು. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಯಿತು. ಸುಧಾರಿಸಿಕೊಳ್ಳುತ್ತಿದ್ದ ಜನರು ಮತ್ತೆ ಸಂಕಷ್ಟಕ್ಕೆ ಒಳಗಾಗಬೇಕಾಯಿತು.
ಮರಾಠಾ ಕಾಲೊನಿ, ಸಮರ್ಥನಗರ, ಕಪಿಲೇಶ್ವರ ಕಾಲೊನಿ ಮೊದಲಾದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಅಲ್ಲಿನವರು ಪರದಾಡುವಂತಾಯಿತು. ಅಜಂನಗರ, ಶಾಹುನಗರ ಮುಖ್ಯ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ಕಾಲುವೆಯಂತೆ ಹರಿಯಿತು. ವಾಹನಗಳ ಸಂಚಾರಕ್ಕೆ ತೊಡಕಾಯಿತು.