ನಿಪ್ಪಾಣಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ವಿಜೇತರಾದ ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಶುಭಾಶಯ ಕೋರಿ ಇಲ್ಲಿನ ಬಸ್ ನಿಲ್ದಾಣದ ಬಳಿ ಶ್ರೀರಾಮ ಸೇನಾ ಹಿಂದೂಸ್ತಾನ ನಿಪ್ಪಾಣಿ ಘಟಕದಿಂದ ಹಾಕಿರುವ ಕಟೌಟ್ನಲ್ಲಿ, ಗೋಕಾಕದ ಶಾಸಕ ಕಾಂಗ್ರೆಸ್ನ ರಮೇಶ ಜಾರಕಿಹೊಳಿ ಫೋಟೊ ಮುದ್ರಿಸಿರುವುದು ಚರ್ಚೆಗೆ ಗ್ರಾಸವಾಯಿತು. ‘ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆಯೇ?’ ಎಂಬ ಮಾತುಗಳು ಕೇಳಿಬಂದವು.
ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರ ನಾಯಕರೊಂದಿಗೆ ಕಾಂಗ್ರೆಸ್ ಶಾಸಕನ ಫೋಟೊ ಇರುವುದು ಕುತೂಹಲ ಹಾಗೂ ಗೊಂದಲಕ್ಕೂ ಕಾರಣವಾಯಿತು.
‘ರಮೇಶ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುತ್ತಿದ್ದಾರೆ’ ಎಂಬ ಮಾತುಗಳು ಚುನಾವಣೆ ಸಂದರ್ಭದಲ್ಲಿ ಕೇಳಿಬಂದಿದ್ದವು. ಈಗ ಬಿಜೆಪಿ ಕಟೌಟ್ನಲ್ಲಿ ‘ಸ್ಥಾನ’ ಕಲ್ಪಿಸಿರುವುದು ಅವರು ಕಮಲ ಪಕ್ಷಕ್ಕೆ ಸಹಕಾರ ಕೊಟ್ಟಿರುವುದಕ್ಕೆ ಪುಷ್ಟಿ ನೀಡುವಂತಿದೆ ಎನ್ನಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಂಘಟನೆಯ ಚಿಕ್ಕೋಡಿ ಜಿಲ್ಲಾ ಘಟಕದ ಪ್ರಮುಖ ನಿಲೇಶ ಹತ್ತಿ, ‘ರಮೇಶ ಜಾರಕಿಹೊಳಿ ಸಾಮಾಜಿಕ ಕಳಕಳಿ ಹೊಂದಿದ ರಾಜಕಾರಣಿ. ಅವರ ಬಳಿಗೆ ಹೋದವರೆಲ್ಲರಿಗೂ ಹಿನ್ನೆಲೆ ನೋಡದೇ ಸಹಾಯ ಮಾಡುತ್ತಾರೆ. ಹೀಗಾಗಿ, ಅವರಿಗೆ ಗೌರವ ತೋರಲು ಅವರ ಭಾವಚಿತ್ರ ಹಾಕಿದ್ದೇವೆ’ ಎಂದು ತಿಳಿಸಿದರು.