ಬೆಳಗಾವಿ: ‘ಮಕ್ಕಳು ಚಿಕ್ಕಂದಿನಿಂದಲೇ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮೊಬೈಲ್ ಬಳಕೆ, ದುಶ್ಚಟಗಳಿಂದ ದೂರವಿರಬೇಕು’ ಎಂದು ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕ ಜಿ. ರಾಮಯ್ಯ ತಿಳಿಸಿದರು.
ಇಲ್ಲಿನ ನಗರ ಕೇಂದ್ರ ಗ್ರಂಥಾಲಯದಲ್ಲಿ ನಡೆದ ‘ಓದುವ ತಿಂಗಳು ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
‘ಸಾರ್ವಜನಿಕರು, ಮಕ್ಕಳಲ್ಲಿ ಓದುವ ಹವ್ಯಾಸವನ್ನು ಮೂಡಿಸುವ ಜೊತೆಗೆ ಗ್ರಂಥಾಲಯ ಪರಿಚಯ ಮಾಡಿಸುವ ಉದ್ದೇಶದಿಂದ ಇಲಾಖೆಯಿಂದ ‘ಓದುವ ತಿಂಗಳು ಕಾರ್ಯಕ್ರಮ’ ಹಮ್ಮಿಕೊಳ್ಳಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
ಸಾಹಿತಿಗಳಾದ ನೀಲಗಂಗಾ ಚರಂತಿಮಠ, ಸ.ರಾ. ಸುಳಕೋಡ ಮಾತನಾಡಿದರು. ಗ್ರಂಥಾಲಯದ ಸಿಬ್ಬಂದಿ ಪ್ರಕಾಶ ಇಚಲಕರಂಜಿ, ಕಾಂತರಾಜು ಜಿ., ಸುಜಾತಾ ಹೊಂಗಲ ಮತ್ತು ಅನ್ನಪೂರ್ಣಾ ನಾವಿ ಮಕ್ಕಳಿಗೆ ಗ್ರಂಥಾಲಯದ ವಿವಿಧ ವಿಭಾಗಗಳನ್ನು ಪರಿಚಯಿಸಿ, ಅವುಗಳ ಕಾರ್ಯನಿರ್ವಹಣೆ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸರ್ದಾರ್ ಕಾಲೇಜು, ಪ್ರೌಢಶಾಲೆಯ 120 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಸಿಬ್ಬಂದಿ ಎ.ಎ. ಕಾಂಬಳೆ, ಶಶಿಕಲಾ ಸೀಮಮಠ, ನೀಲಮ್ಮ ಪಟ್ಟೇದ, ಸುಮಿತ ಕಾವಳೆ, ಬಸವರಾಜ ಜೋಡಳ್ಳಿ, ಆನಂದ ಸಂಗೊಳ್ಳಿ, ಎಂ.ಎಸ್. ಗುಡ್ಡದ, ಮೋಹನ ಬಿ.ಸಿ. ಇದ್ದರು.