ಗೋಕಾಕ (ಬೆಳಗಾವಿ ಜಿಲ್ಲೆ): ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಮತ್ತು 22 ಜನರನ್ನು ಸಾಗಿಸುತ್ತಿದ್ದ ಗೂಡ್ಸ್ ಟಾಟಾ ಏಸ್ ವಾಹನದ ಮಧ್ಯೆ ಮಂಗಳವಾರ ಬೆಳಗಿನಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಹಿಳೆಯರು ಸಾವಿಗೀಡಾಗಿದ್ದರೆ.
ಗೂಡ್ಸ್ ವಾಹನದ ಚಾಲಕ ಸೇರಿದಂತೆ 17 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಸಂಕೇಶ್ವರ- ನರಗುಂದ ರಾಜ್ಯ ಹೆದ್ದಾರಿಯ ತಾಲ್ಲೂಕಿನ ಚಿಕ್ಕನಂದ ಮತ್ತು ಹಿರೇನಂದಿ ಕ್ರಾಸ್ ಬಳಿಯ ಸಹ್ಯಾದ್ರಿ ದಾಭಾ ಬಳಿ ಅಪಘಾತ ಸಂಭವಿಸಿದೆ.
ಮೃತ ಮಹಿಳೆಯರೆಲ್ಲರೂ ಸವದತ್ತಿ ತಾಲ್ಲೂಕಿನ ಯರಗಣ್ವಿ ಮತ್ತು ಮಾಡಮಗೇರಿ ಗ್ರಾಮದ ನಿವಾಸಿಗಳಾಗಿದ್ದರು.
ಸೋಮವಾರ ರಾತ್ರಿ ಗೋಕಾಕ-ಫಾಲ್ಸ್'ನಲ್ಲಿ ನಡೆದ ದೂರದ ಸಂಬಂಧಿಯೊಬ್ಬರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ. ಗೂಡ್ಸ್ ವಾಹನ ಚಾಲಕ ಮಾಡಮಗೇರಿ ಗ್ರಾಮದ ಚಿದಾನಂದ ಮಲ್ಲಪ್ಪ ಖಂಡ್ರಿ ಸೇರಿದಂತೆ ಇತರ ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.