ಬೆಳಗಾವಿ: ‘ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟ ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಶಾಲಾ ವಿದ್ಯಾರ್ಥಿಗಳ ಮೂಲಕ ಜಾಗೃತಿ ಮೂಡಿಸಲು ಜಾಥಾ ಆಯೋಜಿಸಲಾಗಿದೆ’ ಎಂದು ರಾಜ್ಯ ಸುರಕ್ಷತಾ ಪ್ರಾಧಿಕಾರದ ಹೆಚ್ಚುವರಿ ಸಾರಿಗೆ ಆಯುಕ್ತ ಮತ್ತು ನಿರ್ದೇಶಕ ನರೇಂದ್ರ ಹೋಳ್ಳರ ಹೇಳಿದರು.
ಇಲ್ಲಿನ ಕೆಎಲ್ಇ ಸಭಾಂಣಗದಲ್ಲಿ ಗುರುವಾರ ಆಯೋಜಿಸಿದ್ದ ಮೋಟಾರು ವಾಹನ ಕಾಯ್ದೆ, ಅಪಘಾತ ನಿಯಂತ್ರಣಾ ನಿಯಮಗಳ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದಲ್ಲಿ ಪ್ರತಿ ವರ್ಷ ಸರಾಸರಿ 1.50 ಲಕ್ಷ ಜನ ಅಪಘಾತದಿಂದ ಸಾವಿಗೀಡಾಗುತ್ತಿದ್ದಾರೆ. ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿದ್ಯಾವಂತರೆ ಪ್ರಾಣಕ್ಕೆ ಹಾನಿ ಮಾಡಿಕೊಂಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಇದನ್ನು ನಿಯಂತ್ರಿಸಲು ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.
‘ದ್ವಿಚಕ್ರವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸಬೇಕು. ಸಂಚಾರ ನಿಯಮಗಳನ್ನು ಪಾಲಿಸಬೇಕು. ಆಗ ಅಪಘಾತಗಳ ಸಂಖ್ಯೆ ಕ್ಷೀಣಿಸುತ್ತದೆ. ರಸ್ತೆ ಅಪಘಾತಗಳಾದಾಗ ಗಾಯಗೊಂಡವರಿಗೆ ನೆರವಾಗಬೇಕೇ ಹೊರತು, ವಿಡಿಯೊ ಮಾಡುತ್ತಾ ನಿಲ್ಲುವುದು ಸರಿಯಲ್ಲ. ಒಂದು ಜೀವ ಉಳಿಸಿದರೆ ಕುಟುಂಬವನ್ನೇ ಉಳಿಸಿದಂತೆ’ ಎಂದು ಹೇಳಿದರು.
ಪ್ರಾಧಿಕಾರದ ಸದಸ್ಯ ಶೇಖರ್ ಎನ್. ಡೋಲೆ, ಆರ್ಟಿಒ ಶಿವಾನಂದ ಮಗದುಮ್ಮ, ಡಿವೈಎಸ್ಪಿ ಬಿ.ಆರ್. ಯತಿರಾಜ, ಸಿಐಆರ್ಟಿ ಎಸ್.ಎಸ್. ಧೋರೆ, ಅಶೋಕ ಶಿಂಧೆ, ಪ್ರಶಾಂತ ಕಾಕಡೆ, ಎಸಿಪಿ ಕಲ್ಯಾಣಶೆಟ್ಟಿ ಇದ್ದರು.