ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಜೈಲು ಸೇರಿರುವ ಮೊಹಮದ್ ನಲಪಾಡ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಮಂಗಳವಾರ ಮುಕ್ತಾಯವಾಗಿದ್ದು, ಆದೇಶವನ್ನು ಬುಧವಾರಕ್ಕೆ (ಮೇ 30) ಕಾಯ್ದಿರಿಸಲಾಗಿದೆ.
ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದ 63ನೇ ಸೆಷನ್ಸ್ ನ್ಯಾಯಾಲಯ, ಆರೋಪಿ ಪರ ವಕೀಲ ಉಸ್ಮಾನ್ ಹಾಗೂ ವಿದ್ವತ್ ಪರ ಪ್ರಾಸಿಕ್ಯೂಟರ್ ಎಂ.ಎಸ್.ಶ್ಯಾಮಸುಂದರ್ ವಾದ ಆಲಿಸಿತು.
ಶ್ಯಾಮಸುಂದರ್, ‘ದೋಷಾರೋಪ ಪಟ್ಟಿ ಸಲ್ಲಿಸಿದ ಕೂಡಲೇ ಜಾಮೀನು ನೀಡಲೇಬೇಕು ಎಂದೇನಿಲ್ಲ. ಸಾಕ್ಷಿಗಳ ಮೇಲೆ ಪ್ರಭಾವ ಬೀರುವಷ್ಟು ಆರೋಪಿಯು ಪ್ರಬಲನಾಗಿದ್ದಾನೆ. ಪ್ರಕರಣದ ಇನ್ನೊಬ್ಬ ಆರೋಪಿ ಶ್ರೀಕೃಷ್ಣ ತಲೆಮರೆಸಿ ಕೊಂಡಿದ್ದಾನೆ. ಹೀಗಾಗಿ, ಜಾಮೀನು ನೀಡಬಾರದು’ ಎಂದು ಕೋರಿದರು.
ಉಸ್ಮಾನ್, ‘ಎದುರಾಳಿ ವಕೀಲರು ನ್ಯಾಯಾಲಯದ ದಿಕ್ಕು ತಪ್ಪಿಸುತ್ತಿದ್ದಾರೆ. ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಹೀಗಾಗಿ, ಪ್ರಭಾವ ಬೀರಲು ಅವಕಾಶವೇ ಇಲ್ಲ. ಜಾಮೀನು ಮಂಜೂರು ಮಾಡಬೇಕು’ ಎಂದು ಮನವಿ ಮಾಡಿದರು.