ಬೆಂಗಳೂರು: ಪ್ರತಿಯೊಬ್ಬ ನಾಗರಿಕರು ಕಡ್ಡಾಯ ಮತದಾನ ಮಾಡುವಂತೆ ಬಿಬಿಎಂಪಿ ರಾಜರಾಜೇಶ್ವರಿನಗರ ವಲಯದ ಸಿಬ್ಬಂದಿ, ಪೌರಕಾರ್ಮಿಕರು ಮಾನವ ಸರಪಳಿ ನಿರ್ಮಿಸಿ ಜಾಗೃತಿ ಜಾಥಾ ನಡೆಸಿದರು.
ಪ್ರತಿಯೊಬ್ಬ ಮತದಾರರು ಮತ ಚಲಾಯಿಸುವ ಮೂಲಕ ಸಂವಿಧಾನ ಉಳಿಸಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದು ಘೋಷಣೆ ಕೂಗಿದರು. ಮಾನವ ಸರಪಳಿ ನಿರ್ಮಿಸಿದ್ದ ಪೌರ ಕಾರ್ಮಿಕರು ‘ನಾವು ಮತದಾನ ಮಾಡುತ್ತೇವೆ, ನೀವೂ ಮತದಾನ ಮಾಡಿ’ ಎಂದು ಒಕ್ಕೊರಲಿನಿಂದ ಕೂಗಿದರು.
ಕ್ಷೇತ್ರದ ಕೆಲವು ಪ್ರದೇಶಗಳಲ್ಲಿ ಮೆರವಣಿಗೆ ನಡೆಸಿದ ಅವರು, ತಾವು ಮಾಡುವ ಮತ ಅತ್ಯಂತ ಪವಿತ್ರವಾದ್ದದ್ದು. ಹಾಗಾಗಿ ಕಡ್ಡಾಯವಾಗಿ ಮತ ಹಾಕಬೇಕು ಎಂದು ಆಗ್ರಹಿಸಿದರು.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಚುನಾವಣಾ ಸಂಬಂಧ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಚುನಾವಣಾ ನೋಡಲ್ ಅಧಿಕಾರಿ ಕೆ.ಎಸ್.ಪ್ರಕಾಶ್, ಬಿಬಿಎಂಪಿ ಸೂಪರಿಂಟೆಂಡಿಂಗ್ ಎಂಜಿನಿಯರ್ ಉಮಾಶಂಕರ್, ಉಪ ಆಯುಕ್ತ ಜಗದೀಶ್ ಪಾಲ್ಗೊಂಡಿದ್ದರು.
ಮುನಿರಾಜುಗೌಡ ಮತಯಾಚನೆ
ಬೆಂಗಳೂರು: ‘ಕಾಂಗ್ರೆಸ್ ಅಭ್ಯರ್ಥಿಯ ಕೆಲಸಗಳನ್ನು ನೋಡಿದ್ದೀರಿ. ನನಗೂ ಒಮ್ಮೆ ಸೇವೆಗೆ ಅವಕಾಶ ನೀಡಿ’ ಎಂದು ಬಿಜೆಪಿ ಅಭ್ಯರ್ಥಿ ಪಿ.ಮುನಿರಾಜುಗೌಡ ಶನಿವಾರ ಮನೆ ಮನೆಗೂ ಭೇಟಿ ಮಾಡಿ ಮತಯಾಚಿಸಿದರು.
ರಾಜರಾಜೇಶ್ವರಿ ನಗರದ ಸಪ್ತಗಿರಿ ಬಡಾವಣೆ, ಕೃಷ್ಣಪ್ಪ ಬಡಾವಣೆ, ಪುಷ್ಪಗಿರಿ ಬಡಾವಣೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು.
ಕ್ಷೇತ್ರದಲ್ಲಿ ಮೂಲಸೌಲಭ್ಯ ವಂಚಿತವಾಗಿರುವ ಎಲ್ಲಾ ಬಡಾವಣೆಗಳಿಗೆ ಸೌಲಭ್ಯ ಕಲ್ಪಿಸಲು ಮತ ನೀಡಿ, ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಿ ಎಂದು ಕೋರಿದರು.
‘ದೇಶದಲ್ಲಿ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಪರವಾದ ಕೆಲಸಗಳು ನಡೆಯುತ್ತಿವೆ. ರಾಜ್ಯದಲ್ಲಿಯೂ ಅಭಿವೃದ್ಧಿ ಕಾಣಬೇಕಾದರೆ ಬಿಜೆಪಿಗೆ ಬೆಂಬಲಿಸಿ’ ಎಂದರು. ಬಿಬಿಎಂಪಿ ಸದಸ್ಯೆ ನಳಿನಿ ಮಂಜು, ಲಕ್ಷ್ಮಿಕಾಂತ ರೆಡ್ಡಿ ಸಾಥ್ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.