ಬೆಳಗಾವಿ: ‘ಭೂತರಾಮನಹಟ್ಟಿ ಮೃಗಾಲಯದಲ್ಲಿ ಹುಲಿ, ಸಿಂಹ ಸೇರಿದಂತೆ ಅನೇಕ ಪ್ರಾಣಿ–ಪಕ್ಷಿಗಳಿವೆ. ಆಸಕ್ತರು ಅವುಗಳನ್ನು ದತ್ತು ಪಡೆಯಬೇಕು’ ಎಂದು ಯಮಕನಮರಡಿ ಶಾಸಕ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕೋರಿದರು.
ಮೃಗಾಲಯಕ್ಕೆ ಭಾನುವಾರ ಭೇಟಿ ನೀಡಿ, ಅಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಈಗಾಗಲೇ ಕೆಲವರು ಇಲ್ಲಿನ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಮತ್ತೆ ಯಾರಾದರೂ ಆಸಕ್ತರು ಇದ್ದರೆ ಮುಂದೆ ಬರಬೇಕು. ಇಂತಿಷ್ಟು ಹಣ ನೀಡಿ ದತ್ತು ಪಡೆದರೆ ಝೂ ನಿರ್ವಹಣೆಗೆ ಅನುಕೂಲವಾಗುತ್ತದೆ’ ಎಂದರು.
‘ನಾನು ಶಾಸಕನಾಗುವುದಕ್ಕಿಂತ ಮುಂಚೆಯೇ ಈ ಮೃಗಾಲಯ ಇತ್ತು. ಅತ್ಯಂತ ಚಿಕ್ಕದಾಗಿದ್ದ ಇದನ್ನು ಶಾಸಕನಾದ ನಂತರ ಸಾಕಷ್ಟು ಅಭಿವೃದ್ಧಿಪಡಿಸಲಾಗಿದೆ. ಇತ್ತೀಚೆಗೆ ಇಲ್ಲಿಗೆ ಹುಲಿ ಹಾಗೂ ಸಿಂಹಗಳನ್ನು ತರಲಾಗಿದೆ. ಸದ್ಯ ಇಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಉತ್ತರ ಕರ್ನಾಟಕ ಭಾಗದ ಹೆಮ್ಮೆಯ ಮೃಗಾಲಯವಾಗಿದೆ’ ಎಂದರು.
‘ಲಾಕ್ಡೌನ್ ಮುಗಿದ ನಂತರ ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡಬೇಕು. ಮೃಗಾಲಯ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಯಾವ ರೀತಿ ಅಭಿವೃದ್ಧಿಪಡಿಸಿದೆ ಎನ್ನುವುದನ್ನು ಗಮನಿಸಬೇಕು’ ಎಂದು ಹೇಳಿದರು.