ಬೆಳಗಾವಿ: ‘ಮಾಡುತ್ತಾ ಕಲಿ’ ತತ್ವದಡಿ ಆಯೋಜಿಸುವ ಶಿಬಿರಗಳು ವಿದ್ಯಾರ್ಥಿಗಳನ್ನು ಕಲಕೆಯಲ್ಲಿ ತೊಡಗಿಸಲು ಸಹಕಾರಿಯಾಗುತ್ತವೆ’ ಎಂದು ಆರ್.ಎಲ್. ವಿಜ್ಞಾನ ಕಾಲೇಜಿನ ಭೌತವಿಜ್ಞಾನ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಎಸ್.ವಿ. ದಳವಾಯಿ ಅಭಿಪ್ರಾಯಪಟ್ಟರು.
ಇಲ್ಲಿನ ಡಾ.ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ವಿಜ್ಞಾನ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಬೇಸಿಗೆ ವಿಜ್ಞಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಶ್ರಮದಿಂದ, ಸವಾಲುಗಳನ್ನು ಎದುರಿಸಿ ಗಳಿಸುವ ವಿದ್ಯೆ ಶಾಶ್ವತವಾಗಿರುತ್ತದೆ ಮತ್ತು ಅರ್ಥಪೂರ್ಣವಾಗಿರುತ್ತದೆ’ ಎಂದರು.
ಬಿ.ಕೆ. ಕಾಲೇಜಿನ ಭೌತವಿಜ್ಞಾನ ವಿಭಾಗ ಮುಖ್ಯಸ್ಥ ಡಿ.ಎನ್. ಮಿಸಾಳೆ ಮಾತನಾಡಿ, ‘ಮಕ್ಕಳಲ್ಲಿ ವಿಜ್ಞಾನ ವಿಷಯದ ಕುರಿತು ಆಸಕ್ತಿ ಕೆರಳಿಸಿ, ಕುತೂಹಲ ಹುಟ್ಟಿಸಿ ಆಟಿಕೆ ಮತ್ತು ಚಟುವಟಿಕೆಗಳ ಮೂಲಕ ಕಲಿಸಿದರೆ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ’ ಎಂದು ತಿಳಿಸಿದರು.
ಇದೇ ವೇಳೆ ಶೂನ್ಯ ನೆರಳು ದಿನದ ವಿಶೇಷತೆಯನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತೋರಿಸಲಾಯಿತು.
ಬೆಳಗಾವಿ ವಿಜ್ಞಾನ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಾಜನಂದ ಘಾರ್ಗಿ ಅಧ್ಯಕ್ಷತೆ ವಹಿಸಿದ್ದರು. ಆರ್.ಎಲ್. ವಿಜ್ಞಾನ ಕಾಲೇಜಿನ ರಸಾಯನವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಯು.ಆರ್. ರಜಪೂತ, ಉಪನ್ಯಾಸಕರಾದ ಸುಷ್ಮಾ ಕಟ್ಟಿ, ಶ್ರೀಧರ ವಡಗಾವಿ ಉಪಸ್ಥಿತರಿದ್ದರು.