ಬೆಳಗಾವಿ: ‘ಶ್ರೀರಾಮನವಮಿ ಅಂಗವಾಗಿ ಏ. 13ರಂದು ಸಂಜೆ 4ಕ್ಕೆ ಇಲ್ಲಿನ ಅಂಬೇಡ್ಕರ್ ಉದ್ಯಾನದಿಂದ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ‘ಶ್ರೀರಾಮಸೇನಾ ಹಿಂದೂಸ್ತಾನ್’ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ ತಿಳಿಸಿದರು.
‘ಕೈವಲ್ಯಾನಂದ ಸ್ವಾಮೀಜಿ, ಶಿವಾನಂದ ಗುರೂಜಿ ಸಾನ್ನಿಧ್ಯ ವಹಿಸುವರು. ಮುಖಂಡ ರಮೇಶ ಪಾವಲೆ ಅಧ್ಯಕ್ಷತೆ ವಹಿಸುವರು. ಮುಖಂಡರಾದ ಮಲ್ಲಿಕಾರ್ಜುನ ಚುನಮರಿ ಮತ್ತು ಶ್ರೀಕಾಂತ ದೇಸಾಯಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು’ ಎಂದು ಗುರುವಾರ ಮಾಹಿತಿ ನೀಡಿದರು.
‘ಸಂಘಟನೆಯ ಬೆಳಗಾವಿ ಘಟಕದ ಅಧ್ಯಕ್ಷರನ್ನಾಗಿ ರಾಜು ಜಾಧವ, ಉಪಾಧ್ಯಕ್ಷರಾಗಿ ಭಾರತ ಪಾಟೀಲ, ನಗರ ಘಟಕದ ಅಧ್ಯಕ್ಷರನ್ನಾಗಿ ಶ್ರೀಕಾಂತ ಕುರ್ಯಾಳಕರ, ಉತ್ತರ ಘಟಕದ ಅಧ್ಯಕ್ಷರನ್ನಾಗಿ ರಾಹುಲ ಬಡಸಕರ ಮತ್ತು ದಕ್ಷಿಣ ಘಟಕದ ರಾಜೇಂದ್ರ ಬೈಲೂರ ಅವರನ್ನು ನೇಮಕ ಮಾಡಲಾಗಿದೆ’ ಎಂದು ಹೇಳಿದರು.
‘ದೇಶದ ಹಿತದೃಷ್ಟಿ ಕಾಯುತ್ತಾ ಹಿಂದುತ್ವಕ್ಕೆ ಹೆಚ್ಚಿನ ಒತ್ತು ನೀಡುವುದಾದರೆ ನಾವು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಬೆಂಬಲ ನೀಡುತ್ತೇವೆ. ನಮ್ಮ ಸಂಘಟನೆ ಯಾವುದೇ ಪಕ್ಷದ ಪರವಾಗಿಲ್ಲ. ದೇಶದ ಹಿತ ಕಾಯುವವರಿಗೆ ಬೆಂಬಲ ಕೊಡುತ್ತೇವೆ’ ಎಂದು ಪ್ರತಿಕ್ರಿಯಿಸಿದರು.
‘ಶ್ರೀರಾಮಮಂದಿರ ನಿರ್ಮಿಸಬೇಕು. ಗೋಹತ್ಯೆ ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.