ಬೆಳಗಾವಿ: ಬಾಗಲಕೋಟೆ ಜಿಲ್ಲೆ ಪ್ರವಾಸ ಕೈಗೊಳ್ಳಲು ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣಕ್ಕೆ ಬಂದಿಳಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇನ್ಸುಲಿನ್ ಇಂಜೆಕ್ಷನ್ ಗಾಗಿ 45 ನಿಮಿಷಗಳವರೆಗೆ ಕಾದ ಘಟನೆ ಸೋಮವಾರ ನಡೆಯಿತು.
ವಿಮಾನನಿಲ್ದಾಣದಲ್ಲಿ ಉಪಾಹಾರ ಸೇವಿಸಿದ ನಂತರ ಅವರ ಸಹಾಯಕರನ್ನು ಇನ್ಸುಲಿನ್ ಕೊಡುವಂತೆ ಕೇಳಿದ್ದಾರೆ. ಆಗ ಮರೆತು ಬಂದಿರುವುದು ಗೊತ್ತಾಗಿದೆ. ಹೀಗಾಗಿ ಅವರು ಅಲ್ಲಿಯೇ ಕುಳಿತಿದ್ದರು.
ಬಳಿಕ ಕಾಂಗ್ರೆಸ್ ಮುಖಂಡ ಅಶೋಕ ಪಟ್ಟಣ ತಮ್ಮ ಕಾರು ಚಾಲಕರನ್ನು ಬೆಳಗಾವಿಗೆ ಕಳುಹಿಸಿ ಇನ್ಸುಲಿನ್ ತರಿಸಿದರು. ಅದನ್ನು ತೆಗೆದುಕೊಂಡ ಬಳಿಕ ಸಿದ್ದರಾಮಯ್ಯ ಅವರು ಬಾಗಲಕೋಟೆ ಜಿಲ್ಲೆಯತ್ತ ತೆರಳಿದರು.
'ಸಿದ್ದರಾಮಯ್ಯ ಅವರಿಗೆ ಏನೂ ಆಗಿಲ್ಲ. ಇನ್ಸುಲಿನ್ ತೆಗೆದುಕೊಳ್ಳುವುದನ್ನು ಮರೆತಿದ್ದರು. ಏರ್ ಪೋರ್ಟ್ ನಿಂದ ಹೊರಗಡೆ ಬಂದಾಗ ಕುಸ್ತಿಗೆ ಬೇಕಾದರೂ ಕರೀರಿ. ಅವರು ಮೈಸೂರು ಪೈಲ್ವಾನ್ ಎಂದು ಅಶೋಕ ಪಟ್ಟಣ ತಮಾಷೆಯಾಗಿ ಹೇಳಿದರು.