ಬೆಂಗಳೂರು: ‘ದೇಶದ ವಿವಿಧೆಡೆ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಅನೇಕರ ಮೇಲೆ ಅತ್ಯಾಚಾರದ ಆರೋಪ ಇದೆ. ಹೀಗಾಗಿ ಈ ಪಕ್ಷವನ್ನು ಬಲಾತ್ಕಾರಿ ಜನತಾ ಪಾರ್ಟಿ ಎಂದು ಮರುನಾಮಕರಣ ಮಾಡಬಹುದು‘ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ತ್ರಿಪಾಠಿ ಹೇಳಿದರು.
ಮಾಧ್ಯಮ ಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ನರೇಂದ್ರ ಮೋದಿ ನೇತೃತ್ವದ ಸರ್ಕಾರ ತಂದ ನಗದು ರಹಿತ ಯೋಜನೆಯಿಂದ ದೇಶದ ಅರ್ಧಕ್ಕಿಂತ ಹೆಚ್ಚು ಜನರು ಇಕ್ಕಟ್ಟಿಗೆ ಸಿಲುಕಿಕೊಂಡರು. ಚುನಾವಣೆಗೂ ಮುನ್ನ ನೀಡಿದ ಯಾವ ಆಶ್ವಾಸನೆಯನ್ನೂ ಸರ್ಕಾರ ಉಳಿಸಿಕೊಂಡಿಲ್ಲ’ ಎಂದು ದೂರಿದರು.
‘ಕರ್ನಾಟಕದ ಮುಖ್ಯಮಂತ್ರಿ ರಾಜ್ಯದ ಜನತೆಯ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಬೇಕು. ಉತ್ತರ ಭಾರತದಲ್ಲಿ ಸಿದ್ದರಾಮಯ್ಯ ಇದ್ದಿದ್ದರೆ ಮೇರಾ ಭಯ್ಯಾ, ತೇರಾ ಭಯ್ಯಾ ಸಿದ್ದರಾಮಯ್ಯ ಎಂದು ಹೊಗಳುತ್ತಿದ್ದೆವು‘ ಎಂದರು.
‘ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ಪರ್ಧೆಗಿಳಿಯುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಏಪ್ರಿಲ್ 20ರೊಳಗೆ ಪಟ್ಟಿ ಬಿಡುಗಡೆ ಮಾಡುತ್ತೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯುವಂತೆ ಮಾಡುವುದೇ ನಮ್ಮ ಹಂಬಲ’ ಎಂದರು.