ಗೋಕಾಕ: ‘ಭಾರತದ ಸಂವಿಧಾನ ಭಾವೈಕದ ಪ್ರತೀಕವಾಗಿದ್ದು, ಪ್ರತಿಯೊಬ್ಬರೂ ಅದನ್ನು ಗೌರವಿಸಬೇಕು’ ಎಂದು ಮೌಲಾನಾ ಬಶೀರೂಲ್ಲ ಹಕ್ಕ ಕಾಶಮಿ ಹೇಳಿದರು.
73ನೇ ಗಣರಾಜ್ಯೋತ್ಸವ ಆಚರಣೆ ನಿಮಿತ್ತ ‘ಗೋಕಾಕ ಕುಟುಂಬ’ದಿಂದ ಹೊರವಲಯದ ಬಡವರಿಗೆ ಔಷಧಿ, ಬಟ್ಟೆ, ಹೊದಿಕೆ ಹಾಗೂ ಉಪಹಾರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶವು ವಿವಿಧ ರಾಜ್ಯ ಹಾಗೂ ಭಾಷೆಗಳನ್ನು ಹೊಂದಿ ಭಾವೈಕದ ಛಾಪು ಮೂಡಿಸಿ ಇಡೀ ಜಗತ್ತಿಗೆ ಮಾದರಿಯಾಗಿದೆ. ನಾವೆಲ್ಲರೂ ಜಾತ್ಯತೀತವಾಗಿ ಬಲಿಷ್ಠ ಭಾರತವನ್ನು ನಿರ್ಮಿಸಲು ಮುಂದಾಗಬೇಕು’ ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ರಮೇಶ ಜಾರಕಿಹೊಳಿ ಅವರ ಆಪ್ತಸಹಾಯಕ ಸುರೇಶ ಸನದಿ, ‘ಜಾರಕಿಹೊಳಿ ಸಹೋದರ ಸಹಕಾರದೊಂದಿಗೆ ನಗರದ ಗೋಕಾಕ ಕುಟುಂಬ ಸಾಮಾಜಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ರಾಷ್ಟ್ರೀಯ ಹಬ್ಬದ ದಿನ ಈ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಕುತಬುದ್ದೀನ ಗೋಕಾಕ, ಕುತಬುದ್ದೀನ ಬಸ್ಸಾಪೂರಿ, ಅಂಜುಮನ್ ಸಮಿತಿ ಅಧ್ಯಕ್ಷ ಜಾವೇದ ಗೋಕಾಕ, ಇಸ್ಮಾಯಿಲ್ ಗೋಕಾಕ, ಇಸ್ಮಾಯಿಲ್ ಜಮಾದಾರ, ಗಫಾರ ಕಾಗಜಿ, ಕಯ್ಯಾಮ ಖೈರದಿ ಪಾಲ್ಗೊಂಡಿದ್ದರು.