ಬೆಂಗಳೂರು: ಇಲ್ಲಿನ ಮಣಿಪಾಲ್ ಆಸ್ಪತ್ರೆ ವತಿಯಿಂದ ಕ್ಯಾನ್ಸರ್ ಜಾಗೃತಿ ಅಭಿಯಾನ ‘ಐ ಕ್ಯಾನ್ ಸರ್’ಗೆ ನಟಿ ಲಿಸಾ ರೇ ಸೋಮವಾರ ಚಾಲನೆ ನೀಡಿದರು.
‘ಕ್ಯಾನ್ಸರ್ ಮಾರಣಾಂತಿಕ ಕಾಯಿಲೆ ಅಲ್ಲ. ದೃಢಸಂಕಲ್ಪದಿಂದ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯ’ ಎಂದು ಅಭಿಯಾನದಲ್ಲಿ ಸಾರಲಾಗುತ್ತಿದೆ. ಈ ಕಾಯಿಲೆಯಿಂದ ಚೇತರಿಸಿಕೊಂಡವರು ಅನುಭವ ಹಂಚಿಕೊಂಡರು.
ಕ್ಯಾನ್ಸರ್ನಿಂದ ಗುಣಮುಖರಾಗಿರುವ ಲಿಸಾ ರೇ, ‘ನಾನು ಕ್ಯಾನ್ಸರ್ ಪದವೀಧರೆ’ ಎಂದು ಹೇಳಿಕೊಂಡರು. ‘ಕ್ಯಾನ್ಸರ್ಗೆ ತುಂಬು ಹೃದಯದಿಂದ ಧನ್ಯವಾದ ಹೇಳುವೆ. ಅದು ಬದುಕಿನ ಮತ್ತೊಂದು ಮುಖವನ್ನು ಪರಿಚಯಿಸಿದೆ’ ಎಂದರು.
ಭಾರತೀಯ ಕ್ಯಾನ್ಸರ್ ಸಂಘದ ಸದಸ್ಯೆ ಲಿಪಿಕಾ, ‘ಸಣ್ಣ ಮಕ್ಕಳನ್ನೂ ಈ ಕಾಯಿಲೆ ಕಾಡುತ್ತಿದೆ. ಇದರ ಬಗ್ಗೆ ನಾವೆಲ್ಲರೂ ಮುಕ್ತವಾಗಿ ಮಾತನಾಡಬೇಕು. ಉಳಿದವರಿಗೆ ಮಾನಸಿಕ ಸ್ಥೈರ್ಯ ತುಂಬಬೇಕು’ ಎಂದು ತಿಳಿಸಿದರು.
‘ಕ್ಯಾನ್ಸರ್ ಬಗ್ಗೆ ಭಯ ಪಡಬೇಡಿ. ಅದನ್ನು ವಾಸಿ ಮಾಡಬಹುದು. ಅದಕ್ಕೆ ನಾನೇ ಉದಾಹರಣೆ’ ಎಂದು ಪರಿಮಿತ ಸಾಹು ತಿಳಿಸಿದರು
ಉಚಿತ ತಪಾಸಣೆ: ಆಸ್ಪತ್ರೆಯಲ್ಲಿ ಫೆಬ್ರುವರಿ 5ರಿಂದ 10ರವರೆಗೆ ಉಚಿತವಾಗಿ ಸ್ತನ ಕ್ಯಾನ್ಸರ್ ತಪಾಸಣೆ ನಡೆಸಲಾಗುತ್ತದೆ.