ಮೂಡಲಗಿ: ಶೌರ್ಯ, ಪರಾಕ್ರಮಕ್ಕಾಗಿ ಭಾರತೀಯ ಭೂ ಸೇನೆಯಿಂದ ಕೊಡಮಾಡುವ ‘ಗ್ಯಾಲಂಟರಿ ಸೇನಾ ಪ್ರಶಸ್ತಿ‘ಯನ್ನು ತಾಲ್ಲೂಕಿನ ವಡೇರಹಟ್ಟಿ ಗ್ರಾಮದ ಯೋಧ ನಾಗೇಂದ್ರ ರಾಮಚಂದ್ರ ಉದ್ಯಾಗೋಳ ಪಡೆದು ಗಮನಸೆಳೆದಿದ್ದಾರೆ.
2019ರ ಜನವರಿಯಲ್ಲಿ ಜಮ್ಮು ಕಾಶ್ಮೀರದ ಸೋಪಿಯನ್ ಜಿಲ್ಲೆಯ ಸಿರಮಲ್ದ ದಟ್ಟ ಕಾಡಿನಲ್ಲಿ ಅಡಗಿ, ಸುರಂಗ ನಿರ್ಮಿಸಿ ಭಾರತ ನೆಲಕ್ಕೆ ನುಗ್ಗುತಿದ್ದ ಪಾಕಿಸ್ತಾನ ಪ್ರೇರಿತ ನಾಲ್ವರು ಉಗ್ರಗಾಮಿಗಳನ್ನು ಅಟ್ಟಡಗಿಸಿದ ರಾಷ್ಟ್ರೀಯ ರೈಫಲ್ಸ್ ತಂಡದ ಮೊದಲ ಸಾಲಿನಲ್ಲಿ ನಾಗೇಂದ್ರ ಇದ್ದರು. ನಾಲ್ವರು ಉಗ್ರಗಾಮಿಗಳ ಪೈಕಿ ಇಬ್ಬರು ನಾಗೇಂದ್ರ ಅವರ ಗುಂಡಿನ ದಾಳಿಗೆ ಬಲಿಯಾದರು.
ಜೀವದ ಹಂಗು ತೊರೆದು ದೇಶಕ್ಕಾಗಿ ಹೋರಾಡಿದ್ದ ಅವರ ಸಾಹಸವನ್ನು ಉಗ್ರಗಾಮಿಗಳ ನಿಗ್ರಹಕ್ಕಾಗಿ ಇರುವ ರಾಷ್ಟ್ರೀಯ ರೈಫಲ್ಸ್ನ ಆಪರೇಷನ್ ಕ್ಯಾಟ್ ತಂಡದ ಮುಖ್ಯಸ್ಥರು ಸೇರಿ ಸೇನಾ ಅಧಿಕಾರಿಗಳು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ.
ವಡೇರಹಟ್ಟಿಯ ಪುಟ್ಟ ಕೃಷಿ ಕುಟುಂಬದ ನಾಗೇಂದ್ರ 2010ರಲ್ಲಿ ಸೇನೆ ಸೇರಿ, ಪ್ರಾರಂಭದಲ್ಲಿ ಬೆಂಗಳೂರಿನ ಎಂಇಜಿಯಲ್ಲಿ ತರಬೇತಿ ಪಡೆದದರು. ಉಗ್ರಗಾಮಿಗಳನ್ನು ಶೋಧಿಸಿ ಅವರೊಂದಿಗೆ ಹೋರಾಡುವುದು ಅತ್ಯಂತ ಶೌರ್ಯದ ಕಾರ್ಯ. ಉಗ್ರಗಾಮಿಗಳನ್ನು ಸದೆ ಬಡೆಯುವ ಎನ್ಕೌಂಟರ್ಗಾಗಿ ಇರುವ 44 ರಾಷ್ಟ್ರೀಯ ರೈಫಲ್ಗೆ ಸ್ವಯಂಪ್ರೇರಣೆಯಿಂದ ಸೇರಿ ಸಾಹಸ ಮೆರೆದಿದ್ದು ಗಮನಾಹರ್ವಾಗಿದೆ.
‘ದೇಶಕ್ಕಾಗಿ ಮತ್ತು ರಕ್ಷಣೆಗಾಗಿ ಏನಾದರೂ ಮಾಡಬೇಕು ಎಂದು ನಾನು ಸೇನೆ ಸೇರಿದ್ದರೀ. ರಾಷ್ಟ್ರೀಯ ರೈಫಲ್ದಲ್ಲಿ ಸಾಹಸ ಮಾಡುವ ಅವಕಾಶ ಸಿಕ್ಕಿತ್ತರೀ. ಜೀವದ ಭಯ ಬಿಟ್ಟು ದೇಶಕ್ಕಾಗಿ ಹೋರಾಡಿದ್ದರ ತೃಪ್ತಿ ಐತ್ರಿ’ ಎಂದು ಹೆಮ್ಮೆಯಿಂದ ‘ಪ್ರಜಾವಾಣಿ’ ಜೊತೆ ಹೇಳಿಕೊಂಡರು.
ಅವರಿಗೆ ಫೆ.19ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಭೂಸೇನೆಯ ಲೆಫ್ಟಿನೆಂಟ್ ಜನರಲ್ ಆಲುಖ್ಯ ಕರ್ಲೆ ಅವರು ‘ಸೇನೆಯ ಗ್ಯಾಲಂಟರಿ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
‘ಮಗ ದೇಶ ಕಾಯುವ ಕೆಲಸಾ ಮಾಡಿ, ಮೆಡಲ್ ಪಡೆದುಕೊಂಡಿದ್ದು ಬಾಳ ಖುಷಿ ಆಗೈತ್ರೀ’ ಎಂದು ತಂದೆ ಕೃಷಿಕ ರಾಮಚಂದ್ರ ಹಾಗೂ ತಾಯಿ ಸಿದ್ದವ್ವ ಸಂತೋಷ ಹಂಚಿಕೊಂಡರು.
ಆತ್ಮಸ್ಥೈರ್ಯ ತುಂಬುವ ಮತ್ತು ಬದುಕಿಗೆ ನೆರಳಾಗಿರುವ ಪತ್ನಿ ಮಾಲಾಶ್ರೀ ಅವರನ್ನು ನಾಗೇಂದ್ರ ನೆನೆಯುತ್ತಾರೆ. ಸದ್ಯ ರಜೆ ಮೇಲೆ ಊರಿಗೆ ಬಂದಿದ್ದಾರೆ. ತವರಿಗನ ಸನ್ಮಾನ ಸ್ವೀಕರಿಸುತ್ತಿದ್ದಾರೆ. ಸಂಪರ್ಕಕ್ಕೆ ಮೊ:9149724959.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.