ಬೆಳಗಾವಿ: ಕೋವಿಡ್–19 ಲಾಕ್ಡೌನ್ ಕಾರಣದಿಂದಾಗಿ ಅಮೆರಿಕದಲ್ಲಿ ಸಿಲುಕಿ, ಸಂಕಷ್ಟಕ್ಕೆ ಒಳಗಾಗಿದ್ದ ಇಲ್ಲಿನ ಸಂಜೀವ್ ಎಸ್. ದೇಶಪಾಂಡೆ–ಸುರೇಖಾ ದಂಪತಿ ಸ್ವದೇಶಕ್ಕೆ ಮರಳಲು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ನೆರವಾಗಿದ್ದಾರೆ.
ಸ್ವದೇಶಕ್ಕೆ ಮರಳಲು ಸಹಾಯ ಕೋರಿ ಈ ದಂಪತಿ ಈಚೆಗೆ ಮನವಿ ಮಾಡಿದ್ದರು. ಸ್ಪಂದಿಸಿದ ಸಚಿವರು ಕೇಂದ್ರದ ‘ವಂದೇ ಭಾರತ್ ಮಿಷನ್’ ಅಡಿಯಲ್ಲಿ ಅವರನ್ನು ಸ್ಯಾನ್ ಫ್ರಾನ್ಸಿಸ್ಕೊದಿಂದ ಬೆಂಗಳೂರಿಗೆ ಸುರಕ್ಷಿತವಾಗಿ ಕರೆತರಲಾಗಿತ್ತು. ಗುರುವಾರ ಸಚಿವರನ್ನು ಭೇಟಿಯಾದ ಸಂಜೀವ್, ಕೃತಜ್ಞತೆ ಸಲ್ಲಿಸಿದರು.
‘ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವುದು ಕೇಂದ್ರದ ಗುರಿ ಮತ್ತು ಕರ್ತವ್ಯವಾಗಿತ್ತು. ಅದನ್ನು ನಿರ್ವಹಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯಶಸ್ವಿಯಾಗಿದ್ದಾರೆ’ ಎಂದು ಸಚಿವರು ಹೇಳಿದರು.
ಬಿಜೆಪಿ ಮುಖಂಡ ಸಂತೋಷ್ ಕಾಗವಾಡ, ವಿಕ್ರಮ್ ರಾಜಪುರೋಹಿತ್ ಹಾಗೂ ಜಬ್ಬರ್ಸಿಂಗ್ ರಾಜಪುರೋಹಿತ ಇದ್ದರು.