ಗರ್ಲಗುಂಜಿ (ಬೆಳಗಾವಿ ಜಿಲ್ಲೆ): ಖಾನಾಪುರ ತಾಲ್ಲೂಕಿನ ಗರ್ಲಗುಂಜಿಯ ಸರ್ಕಾರಿ ಮರಾಠಿ ಗಂಡು ಮಕ್ಕಳ ಶಾಲೆಯಲ್ಲಿ ಮಳೆಯಿಂದ ತರಗತಿ ಕೊಠಡಿಗಳು ಕುಸಿದಿರುವುದನ್ನು ಕೇಂದ್ರ ಅಧ್ಯಯನ ತಂಡ ಶನಿವಾರ ಬೆಳಿಗ್ಗೆ ಪರಿಶೀಲಿಸಿತು.
ಕೇಂದ್ರ ಜಲ ಆಯೋಗದಜಲಶಕ್ತಿ ಸಚಿವಾಲಯದ ನಿರ್ದೇಶಕ ವಿ.ಅಶೋಕಕುಮಾರ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧೀಕ್ಷಕ ಎಂಜಿನಿಯರ್ ವಿ.ವಿ.ಶಾಸ್ತ್ರಿ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಸಲಹೆಗಾರ ಜಿ.ಎಸ್.ಶ್ರೀನಿವಾಸ ರೆಡ್ಡಿ ನೇತೃತ್ವದ ತಂಡ ಶಾಲೆಗೆ ಭೇಟಿ ನೀಡಿ ಹಾನಿಯ ವಿವರ ಕಲೆಹಾಕಿತು.
ಇದಕ್ಕೂ ಮುನ್ನ, ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ, ನೆರೆ ಹಾನಿ ಮಾಹಿತಿ ಸಂಗ್ರಹಿಸಿತು.
ಯಳ್ಳೂರಿನಲ್ಲಿ ಮಳೆಯಿಂದ ಭತ್ತದ ಬೆಳೆಗೆ ಹಾನಿಯಾಗಿರುವುದನ್ನು ಪರಿಶೀಲಿಸಿತು. ಸಿಂಗೆನಕೊಪ್ಪದಲ್ಲಿ ಕುಸಿದ ಶಾಲೆ ಕೊಠಡಿಗಳನ್ನು ವೀಕ್ಷಿಸಿತು.ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಇತರರು ಇದ್ದರು.
ಶನಿವಾರ ಸಂಜೆಯವರೆಗೆ ಖಾನಾಪುರ ತಾಲ್ಲೂಕಿನ ವಿವಿಧೆಡೆ ತಂಡ ಸುತ್ತಾಟ ನಡೆಸಲಿದೆ.