ತೆಲಸಂಗ: ಹವಾಮಾನ ವೈಪರೀತ್ಯದಿಂದಾಗಿ ಹೋಬಳಿಯಲ್ಲಿ ದ್ರಾಕ್ಷಿ ಬೆಳೆ ಹಾನಿಯಾಗಿರುವುದನ್ನು 8 ಮಂದಿ ಸ್ವಾಮೀಜಿಗಳ ತಂಡದವರು ಶುಕ್ರವಾರ ವೀಕ್ಷಿಸಿದರು. ದ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ ನೀಡಿ ರೈತರಿಗೆ ಧೈರ್ಯ ತುಂಬಿದರು. ಕಷ್ಟದಲ್ಲಿರುವ ಬೆಳೆಗಾರರಿಗೆ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಕಕಮರಿಯ ಆತ್ಮಾರಾಮ ಸ್ವಾಮೀಜಿ ಮಾತನಾಡಿ, ‘ದೇಶದ ಬೆನ್ನೆಲುಬು ರೈತ ಎನ್ನುತ್ತೇವೆ. ಆದರೆ, ಇಂದು ರೈತನ ಬೆನ್ನುಮೂಳೆಯೇ ಮುರದಿದೆ. ಬೆಳೆ ಬಂದರೆ ಬೆಲೆ ಸಿಗುವುದಿಲ್ಲ. ಬೆಲೆ ಇದ್ದಾಗ ಪ್ರಕೃತಿ ಸಾಥ್ ಕೊಡುವುದಿಲ್ಲ. ಸೂಕ್ತ ಮಾರುಕಟ್ಟೆ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ ಅನ್ನ ನೀಡುವ ರೈತರು ಕೃಷಿಯಿಂದ ದೂರ ಸರಿಯುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಸಂಕಷ್ಟದ ಸಮಯದಲ್ಲಿ ಸಹಾಯ ಮಾಡುವ ಮೂಲಕ ರೈತರ ಮನೋಬಲ ಹೆಚ್ಚಿಸುವ ಕೆಲಸ ಸರ್ಕಾರಗಳು ಮಾಡಬೇಕು’ ಎಂದು ಒತ್ತಾಯಿಸಿದರು.
‘ಮೂಗಿಗೆ ತುಪ್ಪ ಒರೆಸುವ ಕೆಲಸ ಮಾಡದೆ, ವೈಜ್ಞಾನಿಕವಾಗಿ ನಷ್ಟ ಗಣನೆಗೆ ತೆಗೆದುಕೊಂಡು ಸೂಕ್ತ ಪರಿಹಾರ ಕೊಡಬೇಕು. ರೈತರುಆತ್ಮಸ್ಥೈರ್ಯ ಕಳೆದುಕೊಳ್ಳಬಾರದು’ ಎಂದು ತಿಳಿಸಿದರು.