ಬೆಳಗಾವಿ: ‘ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಜೇಬುಗಳ್ಳರ ಹಾವಳಿ ತಪ್ಪಿಸಬೇಕು’ ಎಂದು ಆಗ್ರಹಿಸಿ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಪದಾಧಿಕಾರಿಗಳು ನಗರ ಪೋಲಿಸ್ ಆಯುಕ್ತ ಬಿ.ಎಸ್. ಲೋಕೇಶ್ಕುಮಾರ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಮಾತನಾಡಿ, ‘ನಿಲ್ದಾಣದಲ್ಲಿ ದಿನದಿಂದ ದಿನಕ್ಕೆ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಡಿಸಿಸಿ ಬ್ಯಾಂಕ್ನಿಂದ ಬೆಳೆ ಸಾಲ ಪಡೆದುಕೊಂಡು ತಮ್ಮ ಗ್ರಾಮಗಳಿಗೆ ಹಿಂದಿರುಗುವ ರೈತರನ್ನು ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದಾರೆ’ ಎಂದು ತಿಳಿಸಿದರು.
‘ಸೆ. 16ರಂದು ಡಿಸಿಸಿ ಬ್ಯಾಂಕ್ನಿಂದ ಬೆಳೆ ಸಾಲ ತೆಗೆದುಕೊಂಡು ಹೋಗುತ್ತಿದ್ದ ಹುದಲಿಯ ರೈತ ಗೌಡಪ್ಪ ಮೋದಗಿ ಅವರ ಕಿಸೆಯಿಂದ ₹28ಸಾವಿರ ಮತ್ತು ಅದೇ ಗ್ರಾಮದ ಶಿವನಪ್ಪ ಖಣಗನ್ನಿ ಅವರಿಂದ ₹44ಸಾವಿರ ಕಳವು ಮಾಡಲಾಗಿದೆ. ಹೀಗೆ ಹಲವರು ಹಣ ಕಳೆದುಕೊಂಡಿದ್ದಾರೆ’ ಎಂದು ತಿಳಿಸಿದರು.
‘ಕಳ್ಳರನ್ನು ಪತ್ತೆ ಹಚ್ಚಿ ರೈತರಿಗೆ ಹಣ ಮರಳಿಸಬೇಕು. ಪೊಲೀಸರು ನಿಗಾ ವಹಿಸುವಂತೆ ಸೂಚಿಸಬೇಕು’ ಎಂದು ಕೋರಿದರು.
ಗೌಡಪ್ಪ ಮೋದಗಿ, ಆರ್.ಎಸ್. ದರ್ಗೆ, ಹದಲಿ ಗ್ರಾಮ ಪಂಚಾಯ್ತಿ ಸದಸ್ಯ ಯಲ್ಲಪ್ಪ ತಲ್ಲೂರ, ಉಮೇಶ ಕೊಣ್ಣೂರ ಇದ್ದರು.